ಭಾನುವಾರ, ಜೂನ್ 28, 2009

ಆಶಾಡ ಮಾಸದ ಮುಖ್ಯ ದಿನಗಳು

ಆಶಾಡ ಮಾಸದ ಮುಖ್ಯ ದಿನಗಳು


ಆಶಾಡ - ಪೂರ್ಣಿಮಾ

ಗುರುಪೂರ್ಣಿಮಾ

ಇವತ್ತಿನ ದಿನ ಮುಂಜಾನೆ ಸ್ನಾನ ಸಂಧ್ಯಾದಿಗಳನ್ನು ಮುಗಿಸಿಕೊಂಡು ಗುರುಗಳಿದ್ದಲಿಗೆ ಹೋಗಿ ಫಲ-ತಾಂಬೂಲಾಗಳಿಂದ ಅವರನ್ನು ಏಕಾಗ್ರವಾದ ಮನಸ್ಸಿನಿಂದ ಅಭಿನಂದಿಸಿ ಬರಬೇಕು. ಇದರಿಂದ ಎಲ್ಲ ವಿಧವಾದ ಸುಖ ಸಂಪತ್ತುಗಳು ಹತ್ತಿರವಾಗುತ್ತವೆ. ಅಷ್ಟೇ ಅಲ್ಲ, ಎಲ್ಲ ಆಪತ್ತುಗಳು ದೂರವಾಗುತ್ತವೆ.

ದಕ್ಷಿಣಾಯನ ಪ್ರಾರಂಭ

ಇದು ಸಾಮಾನ್ಯವಾಗಿ ಆಶಾಡ ಮಾಸದಲ್ಲಿ ಬರುತ್ತದೆ. ಈ ದಿನ ಉತ್ತರಾಮ ಮುಗಿದು ದಕ್ಷಿಣಾಯನ ಪ್ರಾರಂಭವಾಗುವ ದಿನ. ಎರಡೂ ಆಯನಗಳ ಸಂಗಮ. ಈ ಎರಡರ ಪರ್ವಕಾಲದಲ್ಲಿ ಸ್ನಾನ, ದಾನ, ಹೋಮ ಇತ್ಯಾದಿಗಳನ್ನು ಮಾಡಬೇಕು.

ಆಶಾಡ ಮಾಸದ ಮಹತ್ವ:

ಆಶಾಡ ಮಾಸದ ಮಹತ್ವ:

ಆಶಾಡ ಮಾಸದಲ್ಲಿ ತಾಪಿ ನದಿಯಲ್ಲಿ ಸ್ನಾನ ಮಾಡಬೇಕು ಎಂದು ಶಾಸ್ತ್ರದಲ್ಲಿದೆ. ಆದರೆ ಈಗ ತಾಪಿ ಎನ್ನುವ ನದಿಯೇ ಇಲ್ಲಾ. ಸ್ನಾನ ಮಾಡುವ ಜಲದಲ್ಲಿಯೇ ತಾಪಿ ನದಿಯ ಚಿಂತನೆ ಮಾಡಿ ಸ್ನಾನಿಸಬೇಕು. ಮಹಾ ನದಿಯಾದ ತಾಪಿಯು ಸೂರ್ಯನ ಮಗಳಾಗಿದ್ದು ಸರ್ವ ಗುಣ ಸಂಪನ್ನಳು ಆಗಿದ್ದಾಳೆ. ಪುಣ್ಯಪ್ರದವಾದ ಜಲವುಳ್ಳ ತಾಪೀಂದು. ಸರ್ವರ ಪಾಪಗಳನ್ನೂ ಕಳೆಯುವಾಗ ಅವಳಿಗೆ ಅದೆಂತು ದೋಶವು ಬರುವುದು? ಕೃತಯುಗದ ಆದಿಯಲ್ಲಿ ಇವಳ ಜನ್ಮವು ಆಶಾಡ ಮಾಸದಲ್ಲಿ ಆದ ಪ್ರಯುಕ್ತ ಆ ಮಾಸದಲ್ಲಿ ತಾಪಿ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ನಾಶವಾಗುವುದು. ಹಿಂದಕ್ಕೆ ತಾಪಿ ನದಿಯೊಂದಿಗೆ ದೇವ ನದಿಯಾದ ಗಂಗೆಯ ಸ್ಪರ್ಧೆಯು ಏರ್ಪಟ್ಟಾಗ ಗುಣಗಳಿಂದ ಅಧಿಕವಾದ ಪವಿತ್ರ ತಾಪಿ ನದಿಯು ಗಂಗೆಗಿಂತಲೂ ಶ್ರೇಷ್ಠವಾಗಿರುವವಳೆಂದು ನಿರ್ಣಯವಾಗಿತ್ತು. ಅದೇ ಸಂಧರ್ಭದಲ್ಲಿ ಒಬ್ಬ ಬ್ರಾಹ್ಮಣನು ಗಂಗೆಯು ತನ್ನ ಪಾಪವನ್ನು ಕಳೆಯುವಳೆಂದು ತಿಳಿದು ಗಂಗಾ ಸ್ನಾನಕ್ಕೆ ಬಂದನು. ಅಲ್ಲಿರುವಾಗ ಗಂಗೆಗಿಂತಲೂ ತಾಪಿ ನದಿಯು ಹೆಚ್ಚಿನ ಮಹಾತ್ಮೆವುಳ್ಳದ್ದಾಗಿದೆ ಎಂದು ತಿಳಿದು ಗಂಗೆಯಲ್ಲಿ ಸ್ನಾನ ಮಾಡದೇ ಆ ಬ್ರಾಹ್ಮಣನು ತಾಪಿ ನದಿಗೆ ಹೋಗಿ, ಅದನ್ನೇ ಆಶ್ರಯಿಸಿದನು. ಅಲ್ಲಿ ಮೂರು ದಿನ ನದೀ ಸ್ನಾನ ಮಾಡುವ ಮಾತ್ರದಿಂದ ಅವನ ಚಾಂಡಾಲತ್ವವೂ ಬ್ರಹ್ಮ ಹತ್ಯೆಯೂ ಸಂಪೂರ್ಣ ನಾಶವಾಯಿತು. ಅಂದಿನಿಂದ ಮುನಿಗಳೆಲ್ಲರೂ ಜಹ್ನುವಿನ ಮಗಳಾದ ಗಂಗೆಯಲ್ಲಿ ಸ್ನಾನ ಮಾಡುವುದನ್ನು ಬಿಟ್ಟು ಸೂರ್ಯಪುತ್ರುಯಾದ ತಾಪಿಯನ್ನು ಸ್ತುತಿಸುತ್ತ, ತಾಪಿಯನ್ನು ಆಶ್ರಯಿಸತೊಡಗಿದರು. ಇದನ್ನೆಲ್ಲಾ ನೋಡಿದ ಗಂಗೆಯು ಕಾಂತಿಹೀನಳಾಗಿ ವಿಕೃತವಾದ ಆಕಾರವುಳ್ಳವಳಾಗಿ ಶೋಕಪಡುತ್ತ ದೀನವದನಳಾಗಿ ಬ್ರಹ್ಮದೇವರು ಇದ್ದಳ್ಳಿಗೆ ಧಾವಿಸಿ ಬಂದಳು. ಬ್ರಹ್ಮದೇವರು ಜಾಹ್ನವಿಯನ್ನು ಕೇಳಿದರು "ಏನು? ಇಷ್ಟು ಕಾಂತಿಹೀನಳಾಗಿದ್ದೀ? ಇದಕ್ಕೆ ಏನು ಕಾರಣ?" ಆಗ ಗಂಗೆಯು, "ಹೇ ತಾತ, ಸೂರ್ಯಪುತ್ರಿಯಾದ ತಾಪಿ ಎಂಬ ಹೆಸರಿನ ನದಿಯು ಭೂಲೋಕದಲ್ಲಿ ಬಹಳ ಪ್ರಸಿದ್ಧಳಾಗಿದ್ದಾಳೆ. ಅವಲು ಪಾವಿತ್ರದಿಂದ, ಗರ್ವಿತರಾದ ಎಲ್ಲ ನದಿಗಳನ್ನು ಗೆದ್ದುಬಿಟ್ಟಿದ್ದಾಳೆ. ಅಲ್ಲಿ ಎಲ್ಲರೂ ಸ್ನಾನ ಮಾಡಿ ಉತ್ತಮವಾದ ಲೋಕವನ್ನು ಹೊಂದುತ್ತಿದ್ದಾರೆ. ಸೂರ್ಯಪುತ್ರಿಯ ಈ ತೆರನಾದ ಮಹಿಮೆಯು ಬದಳಷ್ಟಿದೆ. ಹೇ ಪಿತಾಮಹ, ಇಷ್ಟು ದಿನ ನನ್ನಲ್ಲಿ ಸ್ನಾನ ಮಾಡುವವರೆಲ್ಲಾ ಈಗ ಅಲ್ಲಿಗೆ ಹೋಗುತ್ತಿದ್ದಾರೆ. ನನ್ನನ್ನು ಎಲ್ಲ ನದಿಗಳಲ್ಲಿ ಜೇಷ್ಠಳನ್ನಾಗಿ ಮಾಡುತ್ತೇನೆ ಎಂಬ ನಿನ್ನ ಸಂಕಲ್ಪಕ್ಕೆ ಇವತ್ತು ಚ್ಯುತಿ ಬಂದಿದೆ." ಎಂದು ಗೆಂಗೆಯು ತನ್ನ ದುಃಖವನ್ನು ತೋಡಿಕೊಂಡಾಗ ಬ್ರಹ್ಮದೇವರು ನಾರದರಿಗೆ ಅನುಜ್ಞೆಯನ್ನು ಮಾಡಿದರು.

"ಹೇ ನಾರದರೇ, ನೀವು ಈಗಲೇ ಹೋಗಿ ಸೂರ್ಯಪುತ್ರಿಯಾದ ತಾಪಿ ನದಿಯ ಮದಾತ್ಮೆಯನ್ನೆಲ್ಲಾ ಅಪಹರಿಸಿರಿ." ಎಂದು ತಂದೆಯು ಆಜ್ಞಾಪಿಸಲು, ನಾರದರು ಕೂಡಲೇ ಹೋಗಿ ಅವಳ ಮಹಾತ್ಮೆಯನ್ನು ಅಪಹರಿಸಲು ಪ್ರಯತ್ನಿಸಿದರು. ಅದರ ಪಾಪದಿಂದ ನಾರದರ ಜ್ಞಾನವೆಲ್ಲಾ ನಷ್ಟವಾಯಿತು. ಆಗ ಬ್ರಹ್ಮದೇವರು ಇದ್ದಲ್ಲಿಗೆ ಬಂದು ತಮಗೆ ಆಗಿರುವ ಅವಸ್ಥೆಯನ್ನು ನಾರದರು ಭೋಧಿಸಿದರು. "ಹೇ ಗುರೋ, ಈ ನನ್ನ ಅವಸ್ಥೆ ನಷ್ಟವಾಗಬೇಕು" ಎಂದು ಪರಿಪರಿಯಾಗಿ ಪ್ರಾರ್ಥಿಸಿದರು. ಇದಕ್ಕೆ ಬ್ರಹ್ಮದೇವರು "ಈ ಅಜ್ಞಾನ ನಷ್ಟವಾಗುವುದಕ್ಕೆ ನೀವು ಕೂಡಲೇ ಹೋಗಿ ಅದೇ ತಾಪಿ ನದಿಗೇ ಪ್ರಾರ್ಥನೆ ಮಾಡಿ" ಎನ್ನಲು ನಾರದರು ಹೋಗಿ ಹಾಗೆಯೇ ಮಾಡಿದರು. ಕೂಡಲೇ ತಾಪಿಯು ನಾರದರ ಅಜ್ಞಾನವನ್ನೆಲ್ಲಾ ಅಪಹರಿಸಿದಳು. ತದನಂತರ ಬ್ರಹ್ಮದೇವರಿಗೆ ನಾರದರು "ನೀನೆ ತಾಪಿನದಿಯ ಮಹಾತ್ಮೆಯನ್ನು ಅಪಹರಿಸು" ಎಂದು ಹೇಳಲು ಬ್ರಹ್ಮಹೇವರೇ ಸ್ವತಃ ತಾಪಿನದಿಯ ಹತ್ತಿರ ಹೋಗಿ, ಅವಳನ್ನು ಬಹುವಿಧವಾಗಿ ಕೊಂಡಾದಿದರು. ಆಗ ತಾಪಿಯು ಬಂದು ನಿಂತು, ಬ್ರಹ್ಮದೇವರನ್ನು ಸ್ತುತಿಸಿದಳು. "ತಾವು ಇಲ್ಲಿಗೆ ಬಂದ ಕಾರಣವೇನು?" ಎಂದು ಅವಳು ಕೇಳಿದಳು. ಆಗ ಬ್ರಹ್ಮದೇವರು ಅವಳನ್ನು ತಿರಗು ದೇವಲೋಕಕ್ಕೆ ಹೋಗಲು ಆಜ್ಞಾಪಿಸಿದರು. ಅದರಂತೆ ತಾಪಿ ನದಿಯು ಭೂಲೋಕವನ್ನು ಬಿಟ್ಟು, ದೇವಲೋಕಕ್ಕೆ ಹೋದಳು.

ಆಗ ಗಂಗೆಯ ಮನಸ್ಸಿಗೆ ಸಮಾಧಾನವಾಯಿತು. ಆದ್ದರಿಂದ ಸೂರ್ಯನ ಪುತ್ರಿಯಾದ ಶಕ್ತಿಶಾಲಿ ತಾಪಿಯನ್ನು ಆಶಾಡ ಮಾಸದಲ್ಲಿ ನೆನೆಯುತ್ತ ಸ್ನಾನ ಮಾಡಬೇಕು. ಇದು ಒಂದು ಶ್ರೇಷ್ಠವಾದ ಮಹತ್ಮೆ.


ಕಿವಿಮಾತು:

ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ|
ಸ್ವಂ ಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾ ಕೃತಂ ||

ಹೂವು ಹಣ್ಣುಗಳು ಯಾರ ಪ್ರೇರಣೇಯು ಇಲ್ಲದೇ ತಮ್ಮ ಕಾಲವನ್ನು ಮೀರದೇ ಇರುತ್ತವೆ. ಹಾಗೆಯೇ ಪುರಾಕೃತವಾದ ಕರ್ಮವೂ ಸಹ ತನ್ನ ಕಾಲ ಬಂದಾಗ ಫಲಿಸುತ್ತದೆ.

ಭಾನುವಾರ, ಮೇ 31, 2009

ಮಣ್ಣೆತ್ತಿನ ಅಮವಾಸ್ಯ

ಮಣ್ಣೆತ್ತಿನ ಅಮವಾಸ್ಯ

ಜೈಷ್ಠ -- ಅಮವಾಸ್ಯ

ಈ ದಿನ ಮಣ್ಣಿನಿಂದ ಎರಡು ಎತ್ತುಗಳನ್ನು ಮಾಡಿ ವಿಧವಿತ್ತಾಗಿ ಪೂಜಿಸಬೇಕು. ವರ್ಷದಲ್ಲಿ ೫ ಬಾರಿ ಮೃತ್ತಿಕಾ ಪೂಜೆಯನ್ನು ಮಾಡುವುದಾಗಿ ಶಾಸ್ತ್ರವು ನಮಗೆ ಆಜ್ಞೆ ಮಾಡಿದೆ. ಅದರಲ್ಲಿ ಇದು ಒಂದು. ಈ ದಿನ ಮಣ್ಣಿನ ಎತ್ತು ಮಾಡಿ, ಅದರಲ್ಲಿ ವೃಷಭವನ್ನು ಆವಾಹನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಬೇಕು.

ಇದರ ಬಗ್ಗೆ ಈ ಒಂದು ಲೇಖನವಿದೆ -- http://sampada.net/blog/brahmana/12/09/2008/11695

ಮಳೆಗಾಲದ ಪ್ರಾರಂಭ

ಮಳೆಗಾಲದ ಪ್ರಾರಂಭ

ಜೈಷ್ಠ - ಕೃಷ್ಣ - ಪ್ರತಿಪದ

ಇವತ್ತು ಮೃಗಶಿರಾ ಪ್ರವೇಶವಾಗುತ್ತದೆ. ಇವತ್ತಿನಿಂದ ಮಳೆಗಾಲದ ಕೆಲಸಗಳನ್ನು ಪ್ರಾರಂಭಿಸಬಹುದು. ಶಾಸ್ತ್ರದಲ್ಲಿರುವ ಇದರ ವಿವರಗಳು ಮತ್ತು ವೈಜ್ಞಾನಿಕವಾಗಿ ಅದಕ್ಕಿರುವ ಅರ್ಥವನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸುತ್ತೇವೆ.

ವಟ ಸಾವಿತ್ರಿ ವ್ರತ

ವಟ ಸಾವಿತ್ರಿ ವ್ರತ

ಜೈಷ್ಠ -- ಹುಣ್ಣಿಮೆ

ಈ ವ್ರತವು ಸೌಮಾಂಗಲ್ಯದಾಯಕ, ಸಂತಾನದಾಯಕ ಮತ್ತು ವಿವಾಹದಾಯಕವಾಗಿದೆ. ಈ ವ್ರತವನ್ನು ಮೂರು ದಿನಗಳಲ್ಲಿ ಆಚರಿಸುವುದಕ್ಕೆ ಹೇಳಿದ್ದಾರೆ. ಒಂದು ದಿನವಾದರೂ ಆಚರಿಸಲೇಬೇಕು. ಇದರ ವಿವರಗಳನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ದಶಹರಾ ವ್ರತ ಮತ್ತು ಭಾಗಿರಥಿ ಜಯಂತಿ

ದಶಹರಾ ವ್ರತ

ಜೈಷ್ಠ -- ಶುಕ್ಲ -- ದಶಮಿ

ಈ ದಿನ, ಮಂಗಶವಾರ, ಹಸ್ತಾ ನಕ್ಷತ್ರದಲ್ಲಿ ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದಳು. ಈ ದಿನ ವ್ಯತಿಪಾತ ಯೋಗ, ಗಜಕರಣ ಆನಂದಕರಣ, ಕನ್ಯಾರಾಶಿಯಲ್ಲಿ ಚಂದ್ರ ಹಾಗು ವೃಷಭ ರಾಶಿಯಲ್ಲಿ ರವಿ ಇರುವರು. ಇವೆಲ್ಲಾ ಸೇರಿ ಮಹಾ ಯೋಗ ಸಂಭವಿಸುತ್ತದೆ. ಹತ್ತು ವಿಧವಾದ ಪಾಪಗಳನ್ನು ಕಳೆದುಕೊಳ್ಳುವುದಕ್ಕಾಗಿ ನದಿಸ್ನಾನ, ತಿಲತರ್ಪಣ, ಗಂಗಾ ಪೂಜಾದಿಗಳನ್ನು ಮಾಡಬೇಕು. ಹತ್ತು ವಿಧವಾದ ಪಾಪಗಳಲ್ಲಿ ಮೂರು ರೀತಿಯ ಪಾಪಗಳು --

೧. ಕಾಯಿಕ -- ಅಂದರೆ ದೇಹದಿಂದ ಸಂಭವಿಸಬಹುದಾದ ಪಾಪ. ಇದರಲ್ಲಿ, ಒಬ್ಬ ತಾನು ಪರರಿಗೆ ಏನನ್ನು ಕೊಡದೆ ಕೇವಲ ಅವರಿಂದ ಸ್ವೀಕಾರ ಮಾಡುವುದು. ಹಿಂಸೆಯನ್ನು ಮಾಡುವುದು, ಪರಸ್ತ್ರೀ ಸೇವನ ಮಾಡುವುದು, ಈ ರೀತಿಯಾದ ಮೂರು ಪಾಪಗಳು ಬರುತ್ತವೆ.
೨. ವಾಚಕ -- ಅಂದರೆ ಮಾತಿನಿಂದ ಆಗುವ ಪಾಪ. ಕ್ರೂರವಾಗಿ ನುಡಿಯುವುದು, ಸುಳ್ಳು ಹೇಳಿವುದು, ಚಾಡೀ ಹೇಳುವುದು.ಅಸಂಬಂಧವಾಗಿ ಮಾತನಾಡುವುದು, ಈ ನಾಲ್ಕು ವಾಚಕ ಪಾಪಗಳು.
೩. ಮಾನಸಿಕ -- ಅಂದರೆ ವಿಚಾರದಿಂದಾಗುವ ಪಾಪ. ಪರರ ಸಂಪತ್ತನ್ನು ಅಪಹಾರ ಮಾಡುವುದರಲ್ಲಿ ಮನಸ್ಸು ಮಾಡುವುದು, ಮನಸ್ಸಿನಲ್ಲಿಯೆ ಅನ್ಯರಿಗೆ ಕೆಟ್ಟು ಬಯಸುವುದು, ವ್ಯರ್ಥವಾಗಿ ಮನಸ್ಸಿನ ಆವೇಶ ಹೊಂದುವುದು -- ಈ ಮೂರು ಮಾನಸಿಕ ಪಾಪಗಳು.

ಈ ರೀತಿಯಾಗಿ ದಶವಿಧ ಪಾಪಗಳಿವೆ. ಆ ಪಾಪಗಳು ನಷ್ಠವಾಗುವುದಕ್ಕೆ ದಶಹರಾವನ್ನು ಆಚರಿಸಬೇಕು. ಹಿಂದಿನ ಹತ್ತು ಜನ್ಮಗಳಲ್ಲಿ ಸಂಗ್ರಹವಾದ ಬ್ರಹ್ಮ ಹತ್ಯೆಗೆ ಸಮಾನವಾದ ಪಾಪಗಳು ಸ್ನಾನ ಮಾತ್ರದಿಂದಲೇ ನಾಶವಾಗುವುದರಿಂದ ಕೂಡ ಇದನ್ನು ದಶಹರಾ ಎಂದು ಕರೆಯಲಾಗಿದೆ.

ಭಾಗಿರಥಿ ಜಯಂತಿ

ಜೈಷ್ಠ -- ಶುಕ್ಲ -- ದಶಮಿ

ದೇವತೆಗಳ ಲೋಕದಲ್ಲಿ ಸಂಚರಿಸುವ ಸ್ವರ್ಧುನಿಯಾದ ಗಂಗಾದೇವಿಯು ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಬಂದ ದಿನ. ಭಗೀರಥ ತನ್ನ ಪೂರ್ವಿಕರ ಉದ್ಧಾರವಾಗಬೇಕೆಂದು ಸತತ ಪ್ರಯತ್ನ ಮಾಡಿ ಅವಳನ್ನು ಭೂಮಿಗೆ ಕರೆತಂದ ದಿವಸವೇ ಭಾಗೀರಥಿ ಜಯಂತಿ. ಗಂಗೆಯು ಭಗೀರಥನ ಪ್ರಾರ್ಥನೆಯಂತೆ ಪ್ರತಿಪದೆಯ ದಿನ ಭೂಮಿಯಲ್ಲಿ ಪ್ರಕಳಾಗಿ, ದಶಮೆಯ ದಿನ ಪ್ರವಾಹ ರೂಪವನ್ನು ಧರಿಸಿದಳು. ಆದ್ದರಿಂದ ಪ್ರತಿಪದಾದಿಂದ ದಶಮಿಯವರೆಗಿನ ದಿನಗಳು ಅತ್ಯಂತ ಶುದ್ಧವಾದ ದಿನಗಳು.

ಜೈಷ್ಠ ಮಾಸ

ಜೈಷ್ಠ ಮಾಸ

ಜೈಷ್ಠ ಮಾಸದ ಹೆಸರಿನಿಂದಲೇ ಅದರ ಶ್ರೇಷ್ಠತೆಯನ್ನು ತಿಳಿದು ಬರುತ್ತದೆ. ಈ ಮಾಸದಲ್ಲಿ ಮೊಸರು ಅನ್ನ ದಾನಕ್ಕೆ ಬಹಳ ಮಹತ್ವವನ್ನು ಹೇಳಿದ್ದಾರೆ. ಈ ಮಾಸದ ಮಹತ್ವ ಭಗೀರಥನ ಕಥೆಯಲ್ಲಿ ಬರುತ್ತದೆ. ಶಿವನು ಭಗೀರಥನಿಗೆ ಈ ರೀತಿಯಾಗಿ ಆಜ್ಞೆ ಮಾಡಿದನು --

"ಜೈಷ್ಠಮಾಸದಲ್ಲಿ ನಿತ್ಯ ಪ್ರಾತಃ ಕಾಲದಲ್ಲಿ ಎದ್ದು ಪ್ರಾಕರ್ವಿಧಿಗಳನ್ನು ಮುಗಿಸಿದ ನಂತರ ವಿಧಿಪೂರ್ವಕವಾಗಿ ಸ್ನಾನ ಮಾಡಬೇಕು. ಆಮೇಲೆ ತ್ರಿವಿಕ್ರಮ ರೂಪಿಯಾದ ಪರಮಾತ್ಮನ ಪೂಜೆಯನ್ನು ಮಾಡಬೇಕು. ಅನಂತರ ಹೇರಾಜಾ ಯೋಗ್ಯರಾದ ಬ್ರಾಹ್ಮಣರಿಗೆ ಮೊಸರು ಅನ್ನವನ್ನು ಹಾಗು ನೀರನ್ನು ದಾನವಾಗಿ ಕೊಡಬೇಕು. ಈ ಪ್ರಕಾರ ಒಂದು ತಿಂಗಳು ಪರ್ಯಂತ ನೀನು ಭಕ್ತಿಯಿಂದ ಆಚರಿಸಿದರೆ ಶ್ರೀ ಹರಿಯು ಪ್ರಸನ್ನನಾಗಿ, ಸರ್ವ ಪಾಪಗಳನ್ನು ಕಳೆಯಲು ಸಮರ್ಥಳಾದ ಗಂಗೆಯನ್ನು ಭೂಮಿಗೆ ಕರೆದು ತರುವನು." ಈ ಪ್ರಕಾರ ಶಿವನು ತಿಳಿಸಿದಂತೆ ಭಗೀರಥ ರಾಜನು ವ್ರತವನ್ನು ಆಚರಿಸಿದನು. ಆ ವ್ರತಾಚಾರಣೆ ಮಾತ್ರದಿಂದ ವಿಷ್ಣುವು ಪ್ರಸನ್ನನಾಗಿ ರಾಜನಿಗೆ ಪ್ರತ್ಯಕ್ಷನಾದನು, ಗಂಗಾವತಾರಣ ಮಾಡುವುದಾಗಿ ಅವನಿಗೆ ವರವನ್ನು ಕೊಟ್ಟನು. ಈ ರೀತಿಯಾಗಿ ಭವಿಷ್ಯ ಪುರಾಣದಲ್ಲಿ ಬಂದ ಜೈಷ್ಠ ಮಾಸದ ಮಹತ್ಮೆಯಲ್ಲಿ ವರ್ಣನೆ ಮಾಡಿದ್ದಾರೆ. ಈ ಮಾಸವು ಗಂಗಾವತಾರಕ್ಕೆ ಕಾರಣಿಭೂತವಾದ ಮಾಸ ಎಂಬುದಾಗಿ ನಾವು ತಿಳಿಯಬೇಕು. ಈ ಒಂದು ಮಹಾಕಾರ್ಯದಿಂದ ಎಷ್ಟೋ ಸಾತ್ವಿಕರ ಉದ್ಧಾರವಾಗಿದೆ, ಆಗುತ್ತಲೇ ಇದೆ.

ವಿಷ್ಣುರ್ವೈ ಸರ್ವದೇವಾನಾಂ ಜೈಷ್ಠಃ ಶ್ರೇಷ್ಠಃ ಪ್ರಜಾಪತಿಃ |
ತಥಾಯಂ ಸರ್ವಮಾಸಾನಾಂ ಜೈಷ್ಠ ಶ್ರೇಷ್ಠ ತಮಸ್ಮೃತಃ ||

ಎಲ್ಲ ದೇವತೆಗಳಲ್ಲಿ ವಿಷ್ಣುವು ಉತ್ತಮನಾಗಿರುವಂತೆ ಈ ಜೈಷ್ಠ ಮಾಸವು ಉಳಿದೆಲ್ಲ ಮಾಸಗಳಿಗಿಂತ ಶ್ರೇಷ್ಠವಾಗಿದೆ.

ಶನೈಶ್ವರ ಜಯಂತಿ

ಶನೈಶ್ವರ ಜಯಂತಿ

ವೈಶಾಖ -- ಅಮವಾಸ್ಯ - ಕೃತ್ತಿಕಾ ನಕ್ಷತ್ರ - ಅತಿಗಂಡಯೋಗ

ಒಂಬತ್ತು ಗ್ರಹಗಳಲ್ಲಿ ಒಬ್ಬ ಶನಿ. ಇವನ ಪರಿಚಯ ಬಹಳ ಏನು ಬೇಕಾಗಿಲ್ಲಾ. ಪ್ರಾಯ ಮನುಷ್ಯ ತನ್ನ ಜೀವನದಲ್ಲಿ ಶನಿಯ ಅನುಗ್ರಹ ಹಾಗೂ ನಿಗ್ರಹಗಳಿಗೆ ಪಾತ್ರನಾಗಿರುವುದು ಸಹಜ. ಶನಿ ಏನನ್ನು ಮಾಡಬಲ್ಲ. ಬಹಳ ಶ್ರೀಮಂತನಾಗಿದ್ದರೆ ಅವರಿಂದ ದುಷ್ಟ ಕಾರ್ಯಗಳನ್ನು ಮಾಡಿಸಿ ಅವರಿಗೆ ಅಧೋಗತಿ ತರಬಹುದು, ಆರೋಗ್ಯದಲ್ಲಿ ವ್ಯತ್ಯಾಸ ಮಾಡಬಹುದು. ಆಕಸ್ಮಿಕವಾಗಿ ಮರಣವು ಬರಬದುದು. ಎಲ್ಲ ಗ್ರಹಗಳಿಗಿಂತ ನಮಗೆ ಫಲಾಫಲಗಳನ್ನು ನೆನಪಿಡುವಂತೆ ಮಾಡುವವನು ಶನೈಶ್ವರ. ಇವನು ರಾಶಿಗಳಲ್ಲಿ ಮಕರ, ಕುಂಭಗಳಿಗೆ ಅಧಿಪತಿಯಾಗಿದ್ದಾನೆ. ಇವನ ನಾಮಕರಣ ಮಾಡಿದ್ದು ಇವನ ಚಲನವನ್ನನುಸರಿಸಿ. ಶನೈ ಚರತಿ ಇತಿ ಶನೈಶ್ವರಃ -- ಸಂಸ್ಕೃತದಲ್ಲಿ ಶನೈ ಎಂದರೆ ನಿಧಾನ ಎಂದರ್ಥ. ಇವನು ಚಲಿಸುವ ವಿಧಾನವು ನಿಧಾನ. ಇವನು ಒಂದು ರಾಷಿಯಲ್ಲಿ ೨-೧/೨ (ಎರಡೂ ವರೆ) ವರ್ಷ ಇರುತ್ತಾನೆ. ಅಲ್ಲದೆ ಅವನಿದ್ದ ರಾಶಿಗಿಂತ ಹಿಂದಿನ ರಾಶಿ ಹಾಗು ಮುಂದಿನ ರಾಶಿಯನ್ನು ಇದ್ದ ರಾಶಿಯಿಂದಲೇ ಪ್ರೇಕ್ಷಿಸುತ್ತಾನೆ. ಆದ್ದರಿಂದ ಶನಿಯ ಫಲ ೭ (ಏಳು) ವರ್ಷ ಇರುತ್ತವೆ. ಇವನು ರವಿ-ಛಾಯಾದೇವಿಯ ಮಗನಾಗಿ, ದಕ್ಷ ಪ್ರಜಾಪತಿಯ ಮೊಮ್ಮಗನಾಗಿ ಹುಟ್ಟಿದ. ಇವನು ನರಸಿಂಹ ದೇವರ ಪರಮಭಕ್ತ ಹಾಗೂ ಅವರ ಸ್ತೋತ್ರವನ್ನೂ ಮಾಡಿದ್ದಾನೆ. ನರಸಿಂಹ ದೇವರ ಭಕ್ತರನ್ನು ಹಾಗು ಆಂಜನೇಯ ಸ್ವಾಮಿಯ ಭಕ್ತರನ್ನು ಇವನು ಯಾವ ಕಷ್ಟಕ್ಕೂ ಗುರಿಪಡಿಸುವುದಿಲ್ಲಾ ಎಂದು ಹೇಳಿದ್ದಾನೆ. ನರಸಿಂದ ಸ್ತೋತ್ರದಲ್ಲಿ ಈ ರೀತಿ ಹೇಳಿದ್ದಾನೆ --- "ಯಾರು ಸ್ನಾನ ಸಂಧ್ಯಾವಂದನೆ, ದಾನ, ತೀರ್ಥ ಕ್ಷೇತ್ರಗಳ ಸಂದರ್ಸನ, ಸಜ್ಜನರ ಸಂಗ, ನಿರಂತರ ನಿನ್ನ ನಾಮಸ್ಮರಣೆ ಮಾಡುವವರೋ, ನಾನು ಅವರನ್ನು ಕಾಡುವುದಿಲ್ಲಾ. ಯಾರು ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಾರೆಯೋ ಅವರನ್ನು ಸಂಪೂರ್ಣ ಕೆಳಗೆ ಹಾಕುತ್ತೇನೆಠ ಎಂದು ಹೇಳಿದ್ದಾನೆ. ಇದಕ್ಕೆ ಸ್ವಾಮಿ ನರಸಿಂಹ ದೇವರು ಅನುಮತಿ ಕೊಟ್ಚಿದ್ದಾರೆ. ಅದಕ್ಕಾಗಿ ಜಪ-ತಪ-ದಾನ-ಧರ್ಮಗಳನ್ನು ಮಾಡಬೇಕು. ಇದರಲ್ಲಿ ಆಲಸ್ಯವನ್ನು ತೋರಿಸಬಾರದು. ಅನುಕೂಲವಾದರೆ ನವಗ್ರಹ ಹೋಮ ಮಾಡಬೇಕು.

ವೇದವ್ಯಾಸ ಜಯಂತಿ

ವೇದವ್ಯಾಸ ಜಯಂತಿ

ವೇದಗಳನ್ನು ವಿಭಾಗ ಮಾಡಿದವರೇ ವೇದವ್ಯಾಸರು. ಈ ಅವತಾರವು ಇಂದೇ ಆಯಿತೆಂದು ಹೇಳಲಾಗಿದೆ. ವ್ಯಾಸರ ಬಗ್ಗೆ ಬಹಳ ಪರಿಚಯಿಸುವುದಿದೆ. ಮೊದಲಿಗೆ ಅವರನ್ನು ತಿಳಿಯಬೇಕಾಗಿದ್ದು ಜ್ಞಾನದ ನಿಧಿ ಎನ್ನುವುದಾಗಿ. ವೇದಗಳ ಸಾರವನ್ನು ಎಲ್ಲರಿಗೂ ತಿಳಿಯುವುದಕ್ಕಾಗಿ ಮಹಾಭಾರತ, ಭಾಗವತ, ಮೊದಲಾದ ಗ್ರಂಥಗಳನ್ನು ರಚಿಸಿದರು. ಅದನ್ನು ಪ್ರಚಾರ ಸುಮಂತು, ಜೈಮಿನಿ, ವೈಶಂಪಾಯನ, ಶುಕ ಇವರೆ ಮೊದಲಾದವರನ್ನು ಮುಂದೆ ಮಾಡಿದರು. ಇವರು ಸತ್ಯವತಿ ಹಾಗು ಪರಾಶರರ ಮಗನಾಗಿ ಯಮುನಾ ನದಿಯ ದ್ವೀಪದಲ್ಲಿ ಅವತರಿಸಿದರು. ಇವರು ೧೮ (ಹದಿನೆಂಟು) ಪುರಾಣಗಳನ್ನು ರಚಿಸಿದರು. ನಾವು ಒದಿದ ವಿದ್ಯೆ ಸಂರಕ್ಷಿತವಾಗಿರಬೇಕಾದರೆ ಇವರ ಸ್ತೋತ್ರ ನಾಮಸ್ಮರಣೆ ಅತ್ಯಗತ್ಯ.

ಕೂರ್ಮ ಜಯಂತಿ

ಕೂರ್ಮ ಜಯಂತಿ


ಕರ್ಮ ಹರಿಃ ಮಾಂ ನಿರಯಾತ ಅಶೇಷಾತ್

ಇದು ಭಗವಂತ ಅವತಾರವೆ. ಅವನು ಆಮೆಯ ರೂಪದಲ್ಲಿ ಬಂದು ಸಮುದ್ರ ಮಥನದ ವೇಳೆಯಲ್ಲಿ ಸಮುದ್ರದಲ್ಲಿ ಮುಳುಗುತ್ತಿರುವ ಆ ಬಂಗಾರದ ಪರ್ವತವನ್ನು ತನ್ನ ಬೆನ್ನಿನ ಮೇಲೆ ಧಾರಣ ಮಾಡಿದ. ಇದು ಒಂದಾದರೆ ಸಮಸ್ತ ಚೇತನಾಚೇತನಾತ್ಮಕವಾದ ಪ್ರಪಂಚವನ್ನೇ ತನ್ನ ಬೆನ್ನಿನ ಮೇಲೆ ಹೊತ್ತಿದ್ದಾನೆ. ಅಂತಹ ಭಗವಂತನನ್ನು ನೆನೆಸುವುದರಿಂದ ಎಲ್ಲ ಪಾಪಗಳು ನಿವೃತ್ತವಾಗುತ್ತವೆ. ಇದು ಹತ್ತಿ ಅವತಾರಗಳಲ್ಲಿಯೂ ಒಂದಾಗಿದೆ ಮತ್ತು ಕೂರ್ಣ ಪುರಾಣವೆಂದೇ ಪ್ರಸಿದ್ಧವಾಗಿದೆ. ಜೊತಿಷ್ಯ ಶಾಸ್ತ್ರಗಳಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಗೃಹರತವಾದ ವಾಸ್ತಿದೋಷ ಲಿವಾರಣೆಗೆ ಕೂರ್ಮವನ್ನು ಇಡುವುದುಂಟು. ಆ ಕೂರ್ಮರೂಪಿ ಭಗವಂತ ಅವತಾರ ಮಾಡಿದ ದಿನವುದು.

ನರಸಿಂಹ ಜಯಂತಿ

ನರಸಿಂಹ ಜಯಂತಿ

ವೈಶಾಖ ಶುದ್ಧ ತ್ರಯೋದಶಿ ಚಿತ್ತಾ ನಕ್ಷತ್ರ ವಜ ಸಿದ್ಧಿ ಯೋಗಗಳು ತೈತಲಿಕರಣದಂದು ನರಸಿಂಹ ಜಯಂತಿ. ನರಸಿಂದ ರೂಪಿಯಾಗಿ ಅವತಾರ ಮಾಡಿದ ದಿವಸ.

ದುಷ್ಟನಾದ ಹಿರಣ್ಯಕಶಪುವನ್ನು ಸಂಹಾರ ಮಾಡುವುದಕ್ಕೆ ಅವತಾರ ಮಾಡಿದ ದೇವರು ಎಲ್ಲೆ ಇದ್ದರೂ ಸಜ್ಜನರ ಸಂರಕ್ಷಣೆಯನ್ನು ಮಾಡುತ್ತಾರೆ. ಕಂಬದಿಂದ ಹೊರಗೆ ಬಂದು ದೈತ್ಯನನ್ನು ಸಂಹರಿಸಿ ಪ್ರಲ್ಹಾದನನ್ನು ಅನುಗ್ರಹಿಸಿದ ಈ ನರಸಿಂಹ ರೂಪವನ್ನು ನೆನೆಸುವಾಗ ಪ್ರಲ್ಹಾದನನ್ನು ಮರೆಯುವಂತಿಲ್ಲ. ನರಸಿಂಹ ದೇವರನ್ನು ನೆನೆಸುವುದರಿಂದ ಎಲ್ಲ ತರಹದ ಪಾಪಗಳು ಹೋಗಿತ್ತವೆ. ಯಾವ ಗ್ರಹಗಳ ಭಾದೆ ಆಗುವುದಿಲ್ಲ. ಒಳಗೆ ಮನೆ ಮಾಡಿಕೊಂಡಿದ್ದ ಶತ್ರುಗಳು ಭಸ್ಮರಾಗುತ್ತಾರೆ. ಹೊರಗೆ ಇರುವ ಶತ್ರುಗಳು ದೂರ ಪಲಾಯನಗೈಯುತ್ತಾರೆ. ಅನೇಕ ವಿಧವಾದ ರೋಗಗಳು ದೂರವಾಗುತ್ತವೆ. ನವಗ್ರಹಗಳಲ್ಲಿ ಒಂದಾದ ಶನಿಯಪ ತಾನೇ ಸ್ವತಃ ನರಸಿಂಹ ದೇವರ ಮೇಲೆ ಸ್ತೋತ್ರವನ್ನು ಮಾಡಿದ್ದಾನೆ. ಅದರಲ್ಲಿ ಅವನೇ ನರಸಿಂಹ ದೇವರನ್ನು ನೆನೆಸಿದವರನ್ನು ನಾನು ಕಾಡುವುದಿಲ್ಲಾ ಎಂದು ಹೇಳಿದ್ದಾನೆ. ಇಂದಿನ ದಿನ ನರಸಿಂಹ ದೇವರನ್ನು ನೆನೆಯದೆ ಯಾರೂ ಇರಬಾರದು. ಎಷ್ಟೇ ವತ್ತಡ ಇದ್ದರೂ ಕೂಡ ಅವನ್ನು ನೆನಿಸಲೇಬೇಕು. ಇಲ್ಲದಿದ್ದರೆ ನಿಮಗೆ ಶತ್ರುಭಯ, ಶನಿಯ ಗ್ರಹಚಾರ, ರೋಗ, ಆಕಸ್ಮಿತವಾಗಿ ಬರುವ ಆಪತ್ತು ತಪ್ಪಿದ್ದಲ್ಲಾ. ಅನೂಕೂಲವಾದರೆ ಹೋಮವನ್ನೂ ಮಾಡಬೇಕು. ಆಗದಿದ್ದರೆ, ಹೋಮ ಆಗುವ ಸ್ಥಳಕ್ಕೆ ಹೋಗಬೇಕು.

ಗಂಗೋತ್ಪತ್ತಿ

ಗಂಗೋತ್ಪತ್ತಿ

ವೈಶಾಖ ಶುದ್ಧ ಸಪ್ತಮಿ, ಪುಶ್ಯನಕ್ಷತ್ರ, ಶೂಲಯೋಗ, ಗಜಕರಣದಂದು

ಜಹ್ನುರಾಜನು ರಭಸದಿಂದ ಬಂದು ಅವನ ಯಜ್ಞವಾಟವನ್ನೆಲ್ಲ ಆವರಿಸಿದಾಗ ಕ್ರೋಧದಿಂದ ಎಲ್ಲ ಜಲವನ್ನು ಪಾನಮಾಡಿದ ಮತ್ತೆ ಭಗೀರಥ ಪ್ರಾರ್ಥನೆ ಮಾಡಿದಾಗ ತನ್ನ ಬಲದಿಂದ ಹೊರಗೆ ಹಾಕಿದ ದಿನ ಇದು.

ನದಿಗಳಲ್ಲಿ ಶ್ರೇಷ್ಠವಾದ "ಗಂಗಾ" ಹುಟ್ಟಿದ ದಿವಸ. ಅವತ್ತು ಗಂಗೆಯ ಸ್ಮರಣೆಯನ್ನು ಮಾಡಬೇಕು. ಅವಳು ಭೂಮಿಗೆ ಬಂದು ಎಲ್ಲರ ಪಾಪಗಳನ್ನು ಕಳೆಯುವುದಕ್ಕಾಗಿ ಸಿದ್ಧಳಾಗಿದ್ದಾಳೆ. ನಾವು ಅವಳನ್ನು ೧೦೦ ಯೋಜನೆಗಳ ದೂರದಲ್ಲಿದ್ದು ನಮ್ಮ ಮನೆಯಲ್ಲಿ ಮಾಡುವ ಸ್ನಾನ ಕಾಲದಲ್ಲಿ ನಾವು ನೆನಪಿಸಿದಾಗಲು ಅವಳು ಆ ಜಲದಲ್ಲಿ ಸನ್ನಿಹಿತಳಾಗುತ್ತಾಳೆ. ಆ ಜಲದಿಂದ ನಾವು ಸ್ನಾನ ಮಾಡಿದಾಗ ನಮ್ಮ ಪಾಪಗಳು ಕಳೆಯುತ್ತವೆ. ಇವೆಲ್ಲಾ ಕೇವಲ ಗಂಗೆಯ ನಾಮಸ್ಮರಣೆಯಿಂದಲೆ ನೆರವೇರುವ ಕಾಯಕ. ಇವಳು ದೇವತೆಗಳ ಲೋಕದಲ್ಲಿಯು ಹರಿದಿದ್ದಾಳೆ. ಅದಕ್ಕೆ ಇವಳಗೆ ದ್ಯುನದಿ ಎಂದು ಕರೆಯುತ್ತಾರೆ. ಎಂದೆಂದಿಗು ಬತ್ತದೆ ಇದ್ದ ನದಿ ಎಂದರೆ ಅದು ಗಂಗಾ ನದಿ. ಇವಳು ಹಿಮವಂತನ ಜೇಷ್ಠ ಪುತ್ರಿ ಆಗಿದ್ದಾಳೆ. ಭಗೀರಥನ ಪ್ರಯತ್ನದಿಂದ ಧರೆಗೆ ಬಂದವಳು. ನಂದಿನಿ, ನಲಿನಿ, ಸೀತಾ, ಮಾಲತಿ, ಮಲಾಪಹ ಎಂದು ಇವಳನ್ನು ಕರೆಯುವುದುಂಟು.

ಪರಶುರಾಮ ಜಯಂತಿ

ಪರಶುರಾಮ ಜಯಂತಿ

ವೈಶಾಖ ಶುಕ್ಲ ತೃತಿಯಾ
ಕೃತ್ತಿಕಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲಕರಣ

ಪರಶುನಾಮಕನಾಗಿ ಪರಮಾತ್ಮನೆ ಅವತರಿಸಿದ ದಿನ. ಜಗತ್ತಿನಲ್ಲಿ ಯಾವ ಕರ್ತವ್ಯಚ್ಯತರಾದ ದುಷ್ಟ ಕ್ಷತ್ರಿಯರಿದ್ದರೋ, ಯಾರಿಂದ ಪ್ರಜೆಗಳಿಗೆ ತೊಂದರೋಯಾಗುತ್ತಿತ್ತೋ ಆಂತಹ ಪಾಪಿಷ್ಟ ರಾಜರನ್ನು ಸಂಹರಿಸಿ ಉಳಿದ ರಾಜರಿಗೆ ನೀತಿ ಭೋದನೆಯನ್ನು ಮಾಡುವುದಕ್ಕಾಗಿ ದೇವರು ಅವತರಿಸಿದ ದಿನ. "ಪರಶು" ಎಂದರೆ ಇದು ಸಂಸ್ಕೃದ ಶಬ್ದ. ಅದರ ಕನ್ನಡ ಅರ್ಥ "ಕೊಡ್ಡಲಿ"ಎಂದು ಅದನ್ನು ಹಿಡಿದುದದ್ದಕ್ಕೆ ಅವನನ್ನು ಪರಶು-ರಾಮ ಎಂದು ಕರೆಯಲ್ಪಟ್ಟಿತು. ಇವನು ಜಮದಗ್ನಿ ಋಷಿಗಳ ಹಾಗೂ ರೇಣುಕಾ ದೇವಿಯಲ್ಲಿ ಅವತರಿಸಿದ. ಇವನು ೨೧ ಸಲ ಭೂ ಪ್ರದಕ್ಷಿಣೆಯನ್ನು ಮಾಡಿದಾಗ ಸಂಹಾರ ಪೂರ್ಣಗೊಂಡಿತು. ಇವತ್ತಿನ ದಿನ ಅವನನ್ನು ದುಷ್ಚ ಭಂಜಕನೆಂದು ತಿಳಿದು ಚಿಂತಿಸಬೇಕು.

ಜಮದಗ್ನಿ ಸಂತೋವೀರ ಕ್ಷತ್ರಿಯಾಂತಕರ ಪ್ರಭೋ |
ಗ್ರಹಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||

ಅರ್ಥ :- ಜಮದಗ್ನಿಯ ಮಗನೆ, ವೀರನೆ, ದುಷ್ಟ ಕ್ಷತ್ರಿಯರಿಗೆ ಯಮನಂತಿರುವವನೆ, ನಾನು ಕೊಂಡುವ ಅರ್ಘ್ಯವನ್ನು ಸ್ವೀಕರಿಸಿ ನನಗೆ ದುಷ್ಟರ ಭಾಧ ಇಲ್ಲದಂತೆ ಮಾಡು. ನನ್ನನ್ನು ಯಾವಾಗಲು ಅಂತಹ ದುಷ್ಟರಿಂದ ದೂರ ಇಡು. ದುಷ್ಟ ವಿಚಾರಗಳು, ದುಷ್ಟ ಆಚಾರಗಳು ನನ್ನಿಂದ ಆಗದೆ ಇದ್ದಂತೆ ನನ್ನನ್ನು ಕಾಪಾಡು ಎಂದು ಆತನನ್ನು ಪ್ರಾರ್ಥಿಸುವುದೇ ಈ ದಿನದ ವಿಶೇಷ. ಎಲ್ಲರು ಈ ಪ್ರಾರ್ಥನೆಯನ್ನು ಅವಶ್ಯವಾಗಿ ಮಾಡಬೇಕು. ಇವತ್ತಿನ ಜಗತ್ತಿನಲ್ಲಿ ಯಾರಿಗೆ "ದುಷ್ಟ" ಶಬ್ದದ ಪರಿಚಯವಿಲ್ಲ ಹೇಳಿ? ಇವತ್ತು ಶಬ್ದದ ಪರಿಚಯ ನಾಳೆ ದುಷ್ಟತನದ ಅನುಭವ. ಅದನ್ನು ದೂರದಲ್ಲಿ ಎಸೆಯುವುದಕ್ಕಾಗಿ ಈ ಪ್ರಾರ್ಥನೆ.

ಸೋಮವಾರ, ಏಪ್ರಿಲ್ 27, 2009

ಅಕ್ಷಯ ತೃತಿಯಾ ಮಹತ್ವ

ಅಕ್ಷಯ ತೃತಿಯಾ

ವೈಶಾಖ ಶುಕ್ಲ ತೃತಿಯಾ, ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ ತೈತಿಲಕರಣ.

ಅಕ್ಷಯ ತೃತಿಯಾ ಇದು ಕೃತಯುಗದ ಮೊದಲನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನದಲ್ಲಿ ಮಾಡಿದ ಎಲ್ಲ ಕರ್ಮಗಳು ಕೂಡ ಅಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ಇದು ವರ್ಷಕ್ಕೆ ಒಂದು ಬಾರಿ ಬರುವ ದಿನ. ಇವತ್ತು ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಏಕೆಂದರೆ ಆ ದಿನ ಮಾಡಿದ ಕೆಟ್ಟ ಕೆಸಲಗಳು ಅವು ವರ್ಷ ಪೂರ್ತಿ ಮುಂದು ವರೆಯುತ್ತವೆ. ವಿಶೇಷವಾಗಿ ಇವತ್ತು ಗಂಗಾಸ್ನಾನ, ತೀರ್ಥದರ್ಶನ, ಹೋಮ-ಹವನಗಳನ್ನು ಮಾಡುವುದಿದೆ. ಅಕ್ಕಿಯ ದಾನ ಕೂಡ ಮಾಡಬೇಕು.

"ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನ ಭೂಷಿತಮ
ವೈಶಾಖಸ್ಯ ನೀತೇ ಪಕ್ಷೇಸಯಾತ್ಯಂಚ್ಯಚ್ಯುತ ಮಂದಿರಂ"

ಅರ್ಥ - ಶ್ರೀ ಕೃಷ್ಣನನ್ನು ಗಂಧದಿದಂದ ಪೂರ್ತಿಯಾಗಿ ಅಲಂಕಾರ ಮಾಡಿ ಆರಾಧಿಸಿದರೆ ವೈಕುಂಠ ಲೋಕ ಪ್ರಾಪ್ತಿಯಾಗುಗವುದು.

ಅಕ್ಷಯ ತೃತಿಯಾ ದಿನ ಅಲ್ಪ ಜಪ, ದಾನ, ಅಧ್ಯಯನ ಅಕ್ಷಯವಾಗಿ ಪರಿಣಮಿಸುವುದು. ಈ ದಿನಕ್ಕೆ ರೋಹಿಣಿ ನಕ್ಷತ್ರವು ಹಾಗೂ ಬುಧವಾರ ಮಹಾಪುಣ್ಯಕರವು. ಈ ದಿನವು ಮಹಾ ಪುಣ್ಯ ಮುಹೂರ್ತದಲ್ಲಿ ಒಂದಾಗಿದೆ. ಅವತ್ತು ಎಲ್ಲ ವಿಧವಾದ ಕಾರ್ಯಗಳನ್ನು ಆರಂಭಿಸಬಹುದು. ವಿಶೇಷವಾಗಿ ಜಲಕುಂಭ ದಾನವನ್ನು ಮಾಡಬೇಕು. (ಇದರ ಕಾರಣ ಮತ್ತು ಮಹತ್ವ ಅದಷ್ಚು ಬೇಗ ಪ್ರಕಟಿಸಲಾಗುತ್ತದೆ)

ವೈಶಾಖ ಮಾಸದ ಮಹತ್ವ

ವೈಶಾಖ ಮಾಸದ ಮಹತ್ವ

ಈ ಮಾಸದಲ್ಲಿ ಮುಂಜಾನೆ ಎದ್ದು ಮಾಡುವ ಸ್ನಾನಕ್ಕೆ ಬಹಳ ಮಹತ್ವ ಇದೆ ಅನ್ನುವುದನ್ನು ಈ ಶ್ಲೋಕ ಹೇಳುತ್ತದೆ - "ವೈಶಾಖ ಸ್ನಾನ ಮಾತ್ರೇಣ ನ ಪುನಃ ಚಾರ್ಯತೆ ಭುವಿ", ಅಂದರೆ ವೈಶಾಖ ಸ್ನಾನ ಮಾತ್ರದಿಂದ ಈ ಭೂಮಿ ಮೇಲೆ ಮತ್ತೆ ನಡೆಯುವುದಿಲ್ಲಾ. ಅದಕ್ಕಾಗಿ ವೈಶಾಖ ಸ್ನಾನವು ಮೋಕ್ಷಕ್ಕೆ ಅತ್ಯಾವಶ್ಯಕ.

ಈ ಮಾಸದ ದಾನಗಳು -

ಈ ಮಾಸದಲ್ಲಿ ವಿಶೇಷವಾಗಿ ತುಂಬಿದ ಕುಂಭವನ್ನು, ಪಾದರಕ್ಷೆ, ಛತ್ರಿ, ಬಂದ ಅತಿಥಿಗಳಿಗೆ ಉತ್ತಮವಾದ ಚಾಮರ, ತಣ್ಣೀರು, ಎಳೇ ನೀರು, ಪಾನಕ ಅನ್ನ ಇವೆ ಮೊದಲಾವುಗಳನ್ನು ದಾನ ಮಾಡಬೇಕು. ಮಂಚ, ಶಯ್ಯಾ, ಚಾಪೆ, ಕಂಬಳಿ ದಾನವು ಅಪಮೃತ್ಯು ಪರಿಹಾರ, ಅಂದರೆ ಅಕಾಲದಲ್ಲಿ ಆಗುವ ಮೃತ್ಯುವಿನ ಪರಿಹಾರವೆಂದು ಹೇಳಲಾಗಿದೆ. ಉತ್ತಮವಾದ ಶುದ್ಧ ಹತ್ತಿಯ ಬಟ್ಟೆಗಳನ್ನು ದಾನ ಮಾಡಬೇಕು. ಈ ಆಚರಣೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಬುದ್ಧಿ ಇರಬೇಕಾದದ್ದು ಬಹಳ ಅವಶ್ಯಕ. ಈ ದಾನಗಳ ಹಿಂದೆ ಒಂದು ಇತಿಹಾಸವಿದೆ --

ಹಿಂದಕ್ಕೆ ಒಬ್ಬ ಶಂಖ ಬ್ರಾಹ್ಮಣ ಊರಿಂದ ಊರಿಗೆ ಹೋಗುವುದಕ್ಕಾಗಿ ಕಾಡಿನಲ್ಲಿ ಸಂಚಾರ ಮಾಡುತ್ತಿರುವಾಗ ಒಬ್ಬ ದುಷ್ಟನಾದ ವ್ಯಾಧ ಅವನನ್ನು ಹೆದರಿಸಿ. ಅವನಲ್ಲಿ ಇದ್ದ ಎಲ್ಲ ವಸ್ತುಗಳನ್ನು ಅಪಹಾರ ಮಾಡಿದನು. ಎಲ್ಲವನ್ನು ಅವನಿಂದ ಕಿತ್ತುಕೊಂಡು ನೀನಿನ್ನು ಹೊಗು ಎಂದು ಗಹರಿದನು. ಹೆದರಿದ ಬ್ರಾಹ್ಮಣ ಅಲ್ಲಿಂದ ಹೊರಟ. ಕಾಲಲ್ಲಿದ್ದ ಪಾದರಕ್ಷೆಳನ್ನು ಕೂಡ ಆ ವ್ಯಾಧ ಕಿತ್ತುಕೊಂಡಿದ್ದ. ಆ ಭಯಂಕರವಾದ ಬಿಸಿಲಿನಲ್ಲಿ ಬ್ರಾಹ್ಮಣ ಕಾಲು ಸುಡಿಸಿಕೊಳ್ಳುತ್ತಾ ಬದಳ ಕಷ್ಟದಿಂದ, ಬಹು ದೂರಕ್ಕೆ ಹೋಗುವುದನ್ನು ನೋಡಿ ಆ ವ್ಯಾಧನಿಗೆ ಕನಿಕರ ಬಂತು. ಅವನು ತನ್ನ ಹರಕು ಚಪ್ಪಲಿಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಕೊಟ್ಟಿದ್ದು ಆಯಿತು. ತೆಗೆದುಕೊಂಡು ಆ ವ್ಯಕ್ತಿ ಈತನನ್ನು ತುಂಬ ಹೃದಯದಿಂದ ಆಶೀರ್ವದಿಸಿದನು. ನೀನು ವೈಶಾಖ ಮಾಸದಲ್ಲಿ ಪಾದರಕ್ಷೆ ದಾನ ಮಾಡಿದ ನಿನಗೆ ಒಳ್ಳೆಯದಾಗಲಿ ಅಂತ ಬ್ರಾಹ್ಮಣನೆಂದನು. ಇನ್ನು ಉಳಿದ ವೈಶಾಖದ ಮಹತ್ವವನ್ನು ಕೊಂಡಾಡಿದನು. ಆ ವಿಚಾರವನ್ನು ಕೇಳಿ ವ್ಯಾಧನು ಪೂರ್ಣ ಪರಿವರ್ತನೆಗೊಂಡು, ಶಂಖ ಎಂಬ ಆ ಬ್ರಾಹ್ಮಣನಿಂದ ಅಪಹರಿಸಿದ ಎಲ್ಲ ವಸ್ತುಗಳನ್ನು ಹಿಂದಿರುಗಿಸಿದನು.

ಅಷ್ಟು ಹೊತ್ತಿನವರೆಗೆ ಕಾದಾಡುತ್ತಿರುವ ಒಂದು ಸಿಂಹ ಮತ್ತು ಆನೆ ಸುಮ್ಮನೆ ನಿಂತುಕೊಂಡಿದ್ದವು. ಆಗ ಶಂಖನು ಕೇಳಿದನು "ನಿವು ಪರಮ ವೈರಿಗಳು. ಇಲ್ಲಿ ಜೊತೆಯಲಿ ನಿಂತಿದ್ದೀರಲ್ಲಾ, ಯಾರು ನೀವು?". ಅಲ್ಲಿ ಆ ಪ್ರಾಣಿಗಳು ತಮ್ಮ ಚರಿತ್ರವನ್ನು ಹೇಳತೊಡಗಿದವು. ನಾವು ಹಿಂದಿನ ಜನ್ಮದಲ್ಲಿ ಮತಂಗ ಋಷಿಯ ಮಕ್ಕಳು. ನಮ್ಮ ತಂದೆ ವೈಶಾಖ ಮಾಸ ಪ್ರಾಪ್ತವಾದಮೇಲೆ ನಮಗೆ ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಬಿಸಿಲಿನಲ್ಲಿ ಬಂದವರಿಗೆ ಬೀಸಣಿಕೆಯಿಂದ ಬೀಸುವುದು, ಇವೇ ಮೊದಲಾದ ಆತಿಥ್ಯವನ್ನು ಮಾಡುವುದಕ್ಕೆ ಹೇಳಿದ್ದರು. ಆದರೆ ಉನ್ಮತ್ತರಾದ ನಾವು ಯಾವುದನ್ನೂ ಪಾಲಿಸಲಿಲ್ಲ. ಅದು ಅವರಿಗೆ ಬಹಳ ನೋವಾಯಿತು. ಅವರು ಅಲ್ಲೇ ನಮ್ಮನ್ನು ಶಪಿಸಿದರು. ನೀವಿಬ್ಬರು ಕ್ರೋಧ ಮತ್ತು ಮದ ಯೋನಿಯುಳ್ಳ ಪ್ರಾಣಗಳಾಗಿ ಹುಟ್ಟಿ ಎಂದು ಶಪಿಸಿದರು. ಆಗ ನಾನು 'ದಂತಿಲ' ಸಿಂಹನಾಗಿ, ಕೋಹಲನು ಆನೆಯಾಗಿ ಹುಟ್ಟಿದನು. ಬಹಳ ಪರಿಪರಿಯಾಗಿ ಅವರನ್ನು ಪ್ರಾರ್ಥಿಸಿದಾಗ ಅವರು ನಮಗೆ ಕೊಟ್ಟ ಶಾಪದಲ್ಲಿ ಈ ವಿಚಾರ ತಿಳಿಸಿದರು. ಶಂಖ ಎನ್ನುವ ಬ್ರಾಹ್ಮಣ ಒಬ್ಬ ದುಷ್ಠ ವ್ಯಾಧನಿಗೆ ವೈಶಾಖ ಮಾಸದ ಮಹತ್ವವನ್ನು ಹೇಳಬೇಕಾದಾಗ ನೀವಿಬ್ಬರು ಗಮನ ಕೊಟ್ಟು ಆಲಿಸಿರಿ. ಆಗ ನಿವು ಈ ಯೋನಿಯಿಂದ ಮುಕ್ತರಾಗಿ ಮತ್ತೆ ನನ್ನನ್ನೆ ಬಂದು ಸೇರುವಿರಿ ಎಂದರು. ಈಗ ನಾವಿಬ್ಬರೂ ನಿಮ್ಮ ಅನುಗ್ರಹದಿದಂದ ಮುಕ್ತರಾಗಿದ್ದೇವೆ. ನಾವು ಹೋಗಿ ಬರುತ್ತೇವೆ ಎಂದು ದಿವ್ಯವಾದ ದೇಹ, ಅದಕ್ಕೆ ಸುವಾಸನೆಯುತ ಗಂಧ ಲೇಪನ, ಇವೆಲ್ಲ ವೈಭವಗಳಿಂದ ಮುಕ್ತರಾಗಿ ಆ ದಂತಿಲ - ಕೋಹಲ, ಇಬ್ರು ಹೊರಟರು. ಈ ವಿಚಾರವನ್ನು ಶೃತದೇವನು, ಶೃತಕೀರ್ತಿ ಎಂಬ ರಾಜನಿಗೆ ಬೋಧಿಸಿದನು. ಇದು ಸ್ಕಂದ ಪುರಾಣದಲ್ಲಿ ಬಂದಿರುವ ವೈಶಾಖ ಮಾಸದ ಮಹತ್ವದ ವಿಚಾರವಾಗಿದೆ. ಆದ್ದರಿಂದ ಎಲ್ಲರು ಇದರ ಚಿಂತನೆಯನ್ನು ಅವಶ್ಯವಾಗಿ ಮಾಡಿ ಎಲ್ಲ ಪಾಪಗಳನ್ನು ಕಳೆದುಕೊಳ್ಳಬೇಕು.

ಸೋಮವಾರ, ಮಾರ್ಚ್ 23, 2009

ಹನುಮ ಜಯಂತಿ ಮಹತ್ವ

ಹನುಮ ಜಯಂತಿ

ಚೈತ್ರ - ಹುಣ್ಣಿಮೆ ------ ದವನದ ಹುಣ್ಣಿಮೆ

ಈ ಸಲ ೯-೦೪-೨೦೦೯, ಗುರುವಾರ, ಹಸ್ತಾ ನಕ್ಷತ್ರ, ಬ್ಯಾಘ್ಯಾತಯೋಗ, ಭದ್ರಾಕರಣ ಇಂದು ಚೈತ್ರ ಶುದ್ಧ ಹುಣ್ಣಿಮೆಯ ದಿನ ಮುಂಜಾನೆ ೬:೧೬ (6:16) ಸೂರ್ಯೋದಯ ಆದ ಸಮಯದಲ್ಲಿ ಶ್ರೀರಾಮಚಂದ್ರನ ಸರಮ ಭಕ್ತನಾದ ಹನಮಂತನು ಅವತಾರ ಮಾಡಿದ ದಿನ. ಈ ದಿನ ಬಹಳ ಮಹತ್ವದ್ದು. ಹನುಮಂತನ ತಂದೆ ಕೇಸರಿ ಎಂಬ ಶ್ರೇಷ್ಠ ಕಪಿ, ತಾಯಿ ಅಂಜನಾದೇವಿ, ಒಳ್ಳೆಯ ಸಾಧ್ವಿ. ಅವಳು ಋಷಿಗಳ ಅನುಮತಿಯಿಂದ ಇವನನ್ನು ಪಡೆದಳು, ಆದ್ದರಿಂದ ಇವನಿಗೆ ಆಂಜನೇಯ ಎಂದು ಕರೆಯುವುದುಂಟು. ಹನುಮಂತ ದೇವರ ಸ್ಮರಣೆ ನಮಗೆಲ್ಲ ಒಂದು ವಿಶೇಷವಾದ ಶಕ್ತಿಯನ್ನು ತುಂಬಿಕೊಂಡಹಾಗೆ, ಆ ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿ. ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಅವನ ಅನೇಕ ವಿಧವಾದ ಶಕ್ತಿಯನ್ನು ನಾವು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಎಲ್ಲ ಅವಸ್ಥೆಯಲ್ಲಿಯೂ ಅವನನ್ನು ಸ್ಮರಿಸುವುದು ಅವಶ್ಯಕ. ಶಾಸ್ತ್ರಗಳಲ್ಲಿ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಅನೇಕ ಬಾರಿ ಉಲ್ಲೇಖ ಇದೆ. ಅದರಲ್ಲಿ ಕೆಲವು ಈ ರೀತಿಯಾಗಿವೆ:

ಉತ್ತಮ ಬುದ್ಧಿವಂತನಾಗುವುದಕ್ಕೆ, ಶಾರೀರಿಕ ಬಲ ಮತ್ತು ಮಾನಸಿಕ ಬಲ ಇವೆರಡೂ ಬೇಕು, ಅಮ ಸಂಪಾದನೆ ಮಾಡುವುದಕ್ಕೆ, ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವುದಕ್ಕಾಗಿ ಮತ್ತು ಈಗಿನ ಒಂದು ದಿನದ ಪ್ರತಿ ಹಂತ ಹಂತದಲ್ಲೂ ನಮ್ಮಲ್ಲಿ ಧೈರ್ಯ ಕಡಿಮೆಯಾಗುತ್ತಲಿದೆ (ಅದಕ್ಕೆ ಕಾರಣಗಳು ಅನೇಕ, ಅದನ್ನು ಇಲ್ಲಿ ಮೆಲಕು ಹಾಕುವುದು ಬೇಡ) - ಆ ಧೈರ್ಯ ಕುಂದದೆ ಇರುವುದಕ್ಕೆ, ಭಯರಹಿತವಾದ ಜೀವನವನ್ನು ಸಾಧಿಸುವುದಕ್ಕೆ, ನಮ್ಮ ನಮ್ಮ ಧರ್ಮವನ್ನು ಆಚರಿಸದೆ ಇರುವುದಕ್ಕೆ ಕಾರಣವಾದ ನಮ್ಮಲ್ಲಿರುವ ಆಲಸ್ಯತನವು - ಅದನ್ನು ದೂರ ಮಾಡುವುದಕ್ಕೆ, ಮಾತು ಎಲ್ಲರಿಗೂ ಬೇಕು, ಅದಿಲ್ಲದೆ ಜೀವನ ಬಹಳ ಕಷ್ಟ - ಅದರ ಸಂಪಾದನೆಗೂ, ರಾಮನ ಭಕ್ತನಾದ ಹನುಮಂತ, ಆಂಜನೇಯನ ಸ್ಮರಣೆ, ಪ್ರಾರ್ಥನೆ ಇದು ಅತ್ಯಾವಶ್ಯಕ.

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ
ಅಜಾಡ್ಯಂ ವಾಕ್ ಪಟು ತ್ವಂ ಚ ಹನುಮತ್ ಸ್ಮರಣಾತ್ ಭವೇತ್.

ಈ ಶ್ಲೋಕವನ್ನು ಎಲ್ಲರೂ ಪ್ರತಿನಿತ್ಯ ಹೇಳಬೇಕು. ಅದರಲ್ಲಿಯೂ ಹನುಮ ಜಯಂತಿಯ ದಿನ ಮರೆಯುವಹಾಗಿಲ್ಲಾ. ಕಿರಿಯರಿಂದ ಹಿಡಿದು ಮನೆಯ ಅತಿ ಹಿರಿಯರಾದವರೆಲ್ಲರೂ ಮನೆಯಿಂದ ಹೊರಡುವ ಮುಂಚೆ ಈ ಸ್ತೋತ್ರವನ್ನು ಹೇಳಿ ಹೊರಡಬೇಕು. ಇದರಿಂದ ಕಾರ್ಯಸಿದ್ಧಿ ಬೇಗ ಆಗುವುದಲ್ಲದೇ ಯಾವುದೇ ಗ್ರಹಗಳ ಭಾದೆ ಆಗುವುದಿಲ್ಲಾ. (ಹನುಮಂತನ ಸ್ಮರಣೆಯಿಂದ ಗ್ರಹಗಳ ಭಾದೆ ಆಗದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಆದಷ್ಟು ಬೇಗ ಇಲ್ಲಿ ತಿಳಿಸುತ್ತೇವೆ.) ಇದೆಲ್ಲದರ ಜೊತೆ ಹನುಮ ಜಯಂತಿಯ ದಿನ ಎಲ್ಲರೂ ಹತ್ತಿರದ ದೇವಸ್ಧಾನಕ್ಕೆ ಹೋಗಿ ಪೂಜಾದಿಗಳನ್ನು ಸಲ್ಲಿಸಬೇಕು.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ರಾಮ ನವಮಿ ಮಹತ್ವ

ರಾಮ ನವಮಿ

ಚೈತ್ರ - ಶುಕ್ಲ - ನವಮಿ

ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

ಈ ಚೈತ್ರ ಶುಕ್ಲದಲ್ಲಿ ರಾಮ ಅವತಾರ ಮಾಡಿದ ದಿನವು ಬರುತ್ತದೆ. ಅದು ರಾಮನವಮಿ. ರಾಮ ಅವತಾರ ಮಾಡಿದ್ದು ಮಧ್ಯಾಹ್ನದ ಕಾಲದಲ್ಲಿ. ಅವನು ಅಂತಹ ಬಿಸಿಲಿನಲ್ಲಿ ಅವತರಿಸಿದ್ದರೂ ಚಂದ್ರನಂತೆ ಶಾಂತನಾಗಿದ್ದ. ದೇಶದೆಲ್ಲಡೆ ಬಹು ವಿಜೃಂಭಣೆಯಿಂದ ರಾಮನವಮಿ ಉತ್ಸವವನ್ನು ಆಚರಿಸುತ್ತಾರೆ. ಯಾರ ಮನೆ ದೇವರು ರಾಮಚಂದ್ರನಾದಿದ್ದಾನೋ ಅವರು ಚೈತ್ರ ಶುಕ್ಲ ಪ್ರತಿಪದದಿಂದ ನವರಾತ್ರಿ ದೀಪ ಹಾಕುತ್ತಾರೆ. ಇದಕ್ಕೆ ರಾಮ ನವರಾತ್ರಿ ಎಂದು ಕರೆಯುತ್ತಾರೆ.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಗೌರಿ ತೃತಿಯಾ ಮಹತ್ವ

ಗೌರಿ ತೃತಿಯಾ

ಚೈತ್ರ ಶುಕ್ಲ ತೃತಿಯಾದಿಂದ ವೈಶಾಖ ಶುಕ್ಲ ತೃತಿಯಾ ವರೆಗೆ , ಒಂದು ತಿಂಗಳ ಕಾಲ ಗೌರಿಯನ್ನು ಪೂಜಿಸಲಾಗುತ್ತದೆ. ಶಿವ - ಪಾರ್ವತಿಯರ ಪೂಜೆಯನ್ನು ಮಾಡಬೇಕು. ಸುವಾಸಿನಿ ಸ್ತ್ರೀಯರಿಗೆ ಉಡಿ ತುಂಬಬೇಕು. ಪಾನಕ ಮತ್ತು ಕೋಸಂಬರಿಗಳನ್ನು ಕೊಡಬೇಕು. ಈ ಒಂದು ತಿಂಗಳು ಸಮಯದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ಈ ಸಾಮೂಹಿಕ ಆಚರಣೆಯನ್ನು ಮಾಡಲಾಗುತ್ತದೆ.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಯುಗಾದಿಯ ಮಹತ್ವ

ಯುಗಾದಿ

ವಸಂತ ಋತು - ಚೈತ್ರ ಮಾಸ - ಶುಕ್ಲ ಪಕ್ಷ - ಪ್ರತಿಪದ

ಈ ದಿನದ ಮಹತ್ವ:

ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ ಯುಗಾದಿ. ಯುಗಾದಿಯಿಂದ ಒಂದು ಹೊಸ ಸಂವತ್ಸರ ಪ್ರಾರಂಭವಾಗುತ್ತದೆ. ಇದೇ ನಮ್ಮ ಹಿಂದೂ ಪಂಚಾಗದ ಪ್ರಕಾರ ನಮ್ಮೆಲ್ಲರಿಗೂ ಹೊಸ ವರ್ಷ. ಕ್ರಿಸ್ತ ಶಖೆ ೨೦೦೯ರ ಮಾರ್ಚ-೨೭ ರಂದು ಬರುವ ಯುಗಾದಿಯಿಂದ "ವಿರೋಧಿನಾಮ ಸಂವತ್ಸರ" ಎಂಬ ಸಂವತ್ಸರ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಸಂವತ್ಸರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮ ಧರ್ಮದಲ್ಲಿ ಪ್ರತಿ ಸಂವತ್ಸರಕ್ಕೆ (ಅಂದರೆ ಪ್ರತಿ ವರ್ಷಕ್ಕೆ) ಒಂದೊಂದು ಹೆಸರು ಕೊಡಲಾಗಿದೆ. ಸಂವತ್ಸರಗಳು ಒಟ್ಟು ೬೦ (60) ಇದ್ದು, ಅವು ಒಂದಾದ ಮೇಲೊಂದು ಬರುತ್ತವೆ. ಈ ಹಿಂದೆ ಕಳೆದುದು (ಅಂದರೆ ೨೬-ಮಾರ್ಚ-೨೦೦೯ ವರೆಗು ಒಂದು ವರ್ಷ ಕಾಲ ಕಳೆದ ಸಂವತ್ಸರ) "ಸರ್ವಧಾರಿ ನಾಮ ಸಂವತ್ಸರ". ಪ್ರತಿ ಸಂವತ್ಸರವು ಚೈತ್ರ ಶುದ್ಧ ಪ್ರತಿಪದದಿಂದ, ಫಾಲ್ಗುಣ ಕೃಷ್ಣ ಅಮವಾಸ್ಯದ ವರೆಗೆ ಒಂದೊಂದಾಗಿ ಬರುತ್ತವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ ಒಬ್ಬ ೬೦ ವರ್ಷದ ವ್ಯಕ್ತಿ ಹಿಂದೂ ಪಂಚಾಂಗದ ಎಲ್ಲ ಸಂವತ್ಸರಗಳನ್ನು ನೋಡಿರುತ್ತಾನೆ. ಈ ನಿಮಿತ್ತವಾಗಿ ಕೆಲವು ಮನೆಗಳಲ್ಲಿ "ಶಷ್ಟಾಬ್ದಿ" (೬೦ ವರ್ಷದ ಶಾಂತಿ) ಆಚರಿಸುವ ಸಾಂಪ್ರದಾಯಿಕ ಪದ್ಧತಿಯು ಇದೆ. ಅದರ ಬಗ್ಗೆ ವಿವರವಾಗಿ ಇನ್ನೊಂದು ಕಡೆ ಬರೆಯುತ್ತೇನೆ,

ಯುಗಾದಿಯ ದಿನ ಆಚರಿಸಬೇಕಾದ ಕಾರ್ಯಕ್ರಮಗಳು:

ಚೈತ್ರ ಶುಕ್ಲ ಪ್ರತಿಪದ ಮುಂಜಾನೆ ಎದ್ದು ಶಾಂತವಾದ ಮನಸ್ಸಿನಿಂದ ಹಿರಿಯರು ಹೇಳಿದ ಹಾಗೆ ಕೇಳುತ್ತಾ ತುಪ್ಪದ ಪಾತ್ರೆಯಲ್ಲಿ ಮುಖವನ್ನು ನೋಡಿ ಅಮೇಲೆ ಕನ್ನಡಿಯಲ್ಲಿ ಮುಖವನ್ನು ವೀಕ್ಷಿಸಬೇಕು. ಬಂಧು ಬಾಂಧವರಿಂದ ಕೂಡಿಕೊಂಡು ಅಭ್ಯಂಗ ಸ್ನಾನ ಮಾಡಿ, ಪೂಜಾದಿಗಳನ್ನು ಪೂರೈಸಿ ಹೊಸ ಬಟ್ಟೆಗಳನ್ನು ತೊಟ್ಟು, ದೈವಜ್ಞರಿಂದ, ಅಂದರೆ ಶಾಸ್ತ್ರಜ್ಞ ಜೋತಿಷಿಗಳಿಂದ ಆ ವರ್ಷದ ಫಲಗಳನ್ನು ಕೇಳಿ ತಿಳಿಯಬೇಕು. ಇದು ಅಲ್ಲದೇ ಇನ್ನೊಂದು ಸಂಪ್ರದಾಯವಿದೆ. ಮುಂಜಾನೆ ಎದ್ದಾಕ್ಷಣ ಪಂಚಾಂಗ ಶ್ರವಣ ಮಾಡುವವರು ಇದ್ದಾರೆ. ಎರಡೂ ಒಳ್ಳೆಯ ಮಾರ್ಗಗಳೇ. ಇದರ ಜೊತೆ ಈ ಕೆಳಗಿನ ಪದ್ಧತಿಗಳನ್ನು ಆಚರಿಸಬೇಕು.

೧) ಪಂಚಾಂಗ ಪೂಜೆಯನ್ನು ಮಾಡಬೇಕು.
೨) ಗುರು-ಹಿರಿಯರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದವನ್ನು ಸ್ವೀಕರಿಸಬೇಕು
೩) ಮನೆಯವರೆಲ್ಲರೂ ಸೇರಿ "ಬೇವು-ಬೆಲ್ಲ" ಸ್ವೀಕಾರ ಮಾಡಬೇಕು. --- ಬೇವು, ಇದು ದುಃಖದ - ಪಾಪದ ಸಂಕೇತ. ಬೆಲ್ಲ, ಇದು ಪುಣ್ಯದ-ಸುಖದ ಸಂಕೇತ. ಈ ಎರಡೂ ಅವಸ್ಥೆಯನ್ನು ಅತ್ಯಂತ ಧೈರ್ಯವಾಗಿ ಎದರಿಸುತ್ತೇನೆ ಎಂದು ಯುಗಾದಿಯ ದಿನವೇ ಪ್ರತಿಜ್ಞೆಗೈಯುವ ಒಂದು ಕೆಲಸ.
೪) ತೈಲಾಭ್ಯಂಗನ ಅವಶ್ಯವಾಗಿ ಮಾಡಲೇಬೇಕು. ತೈಲಸ್ನಾನದ ಮಹತ್ವವನ್ನು ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ:
ವಸಂತ ಋತುವಿನ ಮೊದಲನೆಯ ದಿನವಾದ ಬಲಿ ಪ್ರತಿಪದಾ ದಿನದಂದು ಯಾವನು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದಿಲ್ಲವೋ ಅವನು ದರಿದ್ರನು ಹಾಗೂ ಮಹಾನರಕಗಾಯಿಯಾಗಿತ್ತಾನೆ ಎಂದು ವಸಿಷ್ಠಸ್ಮುತಿಯಲ್ಲಿ ಹೇಳಲಾಗಿದೆ.

ಚೈತ್ರ ಮಾಸದ ಮಹತ್ವ

ಚೈತ್ರ ಮಾಸದ ಮದತ್ವ

ಭವಿಷ್ಯೊತ್ತರ ಪುರಾಣದಲ್ಲಿ ಬಂದ ಚೈತ್ರಮಾಸದ ವಿಚಾರದಲ್ಲಿ ಈ ರೀತಿಯಾಗಿ ವರ್ಣನೆ ಇದೆ:

ವೈಶಾಖಾತ್ ಕಾರ್ತಿಕಃ ಶ್ರೇಷ್ಠಃ ಕಾರ್ತಿಕಾತ್ ಮಾಘ ಎವ ಚ
ಮಾಘಮಾಸಾದ್ ವರಶ್ಚಾಯಂ ಚೈತ್ರಮಾಸೋ ಭವಿಷ್ಯತಿ.

ವೈಶಾಖಕ್ಕಿಂತ ಕಾರ್ತಿಕ ಶ್ರೇಷ್ಠ ಕಾರ್ತಿಕಕ್ಕಿಂತ ಮಾಘ ಶ್ರೇಷ್ಠ ಮಾಘ ಮಾಸಕ್ಕಿಂತಲೂ ಚೈತ್ರ ಇದು ಶ್ರೇಷ್ಠ. ಈ ಮಾಸದಲ್ಲಿ ಮಾಡಿದ ಸತ್ಕಾರ್ಯ, ಸತ್ ಪಾತ್ರರಿಗೆ ದಾನಮಾಡಿದ್ದು, ಯಜ್ಞಯಾಗಾದಿಗಳನ್ನು ಮಾಡಿದ್ದು, ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿದ್ದು, ಶಾಸ್ತ್ರ ವಿಚಾರ ಮಾಡಿದ್ದು ಎಲ್ಲವೂ ಕೋಟಿ ಪಟ್ಟು ಅಧಿಕ ಫಲಪ್ರದವಾಗುತ್ತದೆ. ಅದರಲ್ಲಿಯೂ ಇವೆಲ್ಲವನ್ನು ಅಯೋಧ್ಯದಲ್ಲಿ ಮಾಡಿದರೆ ಇನ್ನೂ ವಿಶೇಷ.

ಹನ್ನೆರಡು ಮಾಸಗಳಲ್ಲಿ ಮೊದಲನೆಯಾದ ಈ ಚೈತ್ರ ಮಾಸವು ಸಕಲ ಜೀವರಾಶಿಗೆ ಇಷ್ಟವಾದುದನ್ನು ಕೊಡುತ್ತಾ ತಾಯಿಯಂತೆ ಶೋಭಿಸುತ್ತದೆ. ಧರ್ಮಪ್ರವರ್ತಕರಾದ ಪ್ರಭು ಶ್ರೀ ರಾಮಚಂದ್ರನು ಈ ಮಾಸದಲ್ಲಿ ಅವತರಿಸಲು, ಸಂತುಷ್ಟರಾದ ದೇವತೆಗಳು ಹಾಗೂ ಸಜ್ಜನರೆಲ್ಲರೂ ದೇವದೇವೋತ್ತಮರಾದ ಆ ಪುರಾಣ ಪುರುಷನನ್ನು ವಿವಿಧ ರೀತಿಯಿಂದ ಸ್ತುತಿಸಿದರು. ಗೀತ - ವಾದ್ಯ- ನೃತ್ಯಗಳೊಂದಿಗೆ ಪ್ರಸನ್ನಗೊಳಿಸಿದರು. ಚೈತ್ರ ಮಾಸದ ಹಿರಿಮೆಯನ್ನು ಕೊಂಡಾಡಿ, ಆ ಮಾಸಕ್ಕೆ ವಿಶೇಷವಾದ ವರದಾನ ಕೊಡುವಂತೆ ಪ್ರಾರ್ಥಿಸಿದರು. ಆಗ ಪ್ರಸನ್ನನಾದ ಶ್ರೀರಾಮಚಂದ್ರನು -

ಸರ್ವೇಷಾಮೇವ ಮಾಸಾನಾಂ ಶ್ರೇಷ್ಠಾಶ್ಚಾಯಂ ಭವಿಷ್ಯತಿ
ಅಯೋಧ್ಯಾಯಾಂ ರಾಮತೀರ್ಥ ಸರಯಾಜಲ ಮಧ್ಯಗೇ
ಚೈತ್ರಸ್ನಾನಂ ಪ್ರರುರ್ವಾಣಾ ಸ್ತ್ರೀ ನರಾ ಮೋಕ್ಷಭಾಗಿನಃ

ಎಲ್ಲ ಮಾಸಗಳಿಗೆ ತಾಯಿಯಂತೆ ಇರುವ ಚೈತ್ರ ಮಾಸವು ಮಾಸಗಳಲ್ಲಿ ಶ್ರೇಷ್ಠವಾಗುವಂತೆ ವರದಾನ ಮಾಡಿದನು. ಅಷ್ಠೇ ಅಲ್ಲದೇ ತಾನು ಸ್ವತಃ ಅದೇ ಮಾಸದಲ್ಲಿ ಅವತಾರ ಮಾಡಿದನು. ಅಯೋಧ್ಯಯಲ್ಲಿರುವ ಸರಯೂ ನದಿ (ರಾಮತೀರ್ಥ) ಅಲ್ಲಿ ಸ್ನಾನ ಮಾಡಿದವರಿಗೆ, ಅವರಿಗೆ ಬರುವ ಎಲ್ಲ ಆಪತ್ತುಗಳನ್ನು ದೂರ ಮಾಡುತ್ತೇನೆ ಎಂದು ಹೇಳಿದ್ದಾನೆ.

ಚೈತ್ರ ಮಾಸದಲ್ಲಿ ಮಾಡಬೇಕಾದ ಕಾರ್ಯಗಳು

ಮಾರ್ಗದಲ್ಲಿ ಹೋಗುವವನಿಗೆ ನೀರಿನ ವ್ಯವಸ್ಥೆ (ಅರವಟ್ಟಿಗೆ)
ಬಿಸಿಲಿನಲ್ಲಿ ಬಂದವರಿಗೆ ಒಳ್ಳೆಯ ನೆರಳಿನ ವ್ಯವಸ್ಥೆ
ಊಟವಿಲ್ಲದವನಿಗೆ ಊಟ ವಸತಿ ವ್ಯವಸ್ಥೆ

ನೀರು ದಾನ ಮಾಡದೆ ಇದ್ದಲ್ಲಿ ಅವನು ಮುಂದೆ ಜಾತಕ ಪಕ್ಷಿಯಾಗಿ ಹುಟ್ಟಿ ನೀರಿಗಾಗಿ ಪರದಾಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿಲಾಗಿದೆ.
ಗೋದಿ, ಹಾಸಿಗೆ (ಶಯ್ಯಾ), ಬೆಲ್ಲ, ತುಪ್ಪ, ಮೊಸರು, ನೆಲ್ಲಿಕಾಯಿ, ಮಾವು ಇವೆ ಮೊದಲಾದವುಗಳು ವಿಶೇಷ ಪುಣ್ಯಕಾರಿ.

ಚೈತ್ರ ಮಾಸದಲ್ಲಿ ಅಯೋಧ್ಯಾ ಪಟ್ಟಣದಲ್ಲಿ ಇರುವ ಸರಯೂ ನದಿಯಲ್ಲಿ (ರಾಮತೀರ್ಥದಲ್ಲಿ) ಸ್ನಾನ ಮಾಡಬೇಕು. ವಿಶೇಷವಾಗಿ ರಾಮಾಯಣ ಶ್ರವಣ ಮಾಡಬೇಕು.
ಶ್ರಾಸ್ತ್ರದ ಒಂದು ಶ್ಲೋಕದಲ್ಲಿ ಈ ರೀತಿ ಹೇಳಲಾಗಿದೆ

ಸರ್ವ ತೀರ್ಥೇಷು ಯತ್ ಪುಣ್ಯಂ ಸರ್ವ ದಾನೇಷು ಯತ್ ಫಲಂ |
ರಾಮಾಯಣಸ್ಯ ಪಠಣಾತ್ ತತ್ ಫಲಂ ನವರಾತ್ರಕೇ ||

ಇದರ ಅರ್ಥ :

ಎಲ್ಲ ತೀರ್ಥಗಳಲ್ಲಿ ಹೋಗಿ ಸ್ನಾನಾದಿಗಳನ್ನು ಮಾಡಿದರೆ ಯಾವ ವಿಶಿಷ್ಠ ಪುಣ್ಯ ಪ್ರಾಪ್ತವಾಗುವುದೋ, ಎಲ್ಲ ದಾನಗಳನ್ನು ಮಾಡಿದರೇ ಯಾವ ಪುಣ್ಯ ಪ್ರಾಪ್ತವಾಗುವುದೋ, ಆ ಪುಣ್ಯ ರಾಮಾಯಣ ಶ್ರವಣದಿಂದ ಬರುತ್ತದೆ.

ಈ ಮಾಸದಲ್ಲಿ ಬರುವ ಮುಖ್ಯ ದಿನಗಳು:

೧) ಯುಗಾದಿ -- ಶುಕ್ಲ ಪ್ರತಿಪದ
೨) ಗೌರಿ ತೃತಿಯಾ -- ಶುಕ್ಲ ತೃತಿಯಾ
೩) ರಾಮನವಮಿ -- ಶುಕ್ಲ ನವಮಿ
೪) ಏಕಾದಶಿ
೫) ಹನುಮ ಜಯಂತಿ -- ಹುಣ್ಣಿಮೆ -- ದವನದ ಹುಣ್ಣಿಮೆ.

ಬುಧವಾರ, ಮಾರ್ಚ್ 11, 2009

ಇದೇ ಬ್ಲಾಗ್ - English ಅಲ್ಲಿ

ನಮಸ್ಕಾರ ,

ಈ ಬ್ಲಾಗ್ ಓದಿ, ನಿಮ್ಮ ಅನಸಿಕೆಗಳನ್ನು ತಿಳಿಸಿ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಕ್ಕೇ ಎಲ್ಲ ಓದುಗರಿಗೂ ನನ್ನ ಧನ್ಯವಾದಗಳು.

ಈ ಬ್ಲಾಗಿನ ಮೊದಲನೇಯ ಲೇಖನ ಬರೆದು ಜನರಿಗೆ ತಿಳಿಸಿದಾಗ ಕೆಲವರು ಇದು ಕನ್ನಡದಲ್ಲಿ ಇರುವುದು ಒಂದು ಕೊರತೆ ಎಂಬ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಕನ್ನಡ ಭಾಷೆ ಅರಿಯದೆ ಇರುವವರು, ಮತ್ತೆ ಕನ್ನಡ ಮಾತನಾಡಲು ಬಂದರೂ, ಸರಿಯಾಗಿ ಓದಲು ಬಾರದೆ ಇರುವವರೂ ಸಹ ಇಲ್ಲಿ ಪ್ರಕಟಿಸಲಾಗುವ ವಿಷಯಗಳನ್ನು ತಿಳಿದುಕೊಳ್ಳುವ ಇಚ್ಛೆಯನ್ನು ತಿಳಿಸಿದರು. ಈ ಕೊರತೆಯ ಅರಿವು ನಮಗೆ ಮುಂಚೆಯೇ ಗೊತ್ತಿದ್ದರು ಈ ಎಲ್ಲಾ ವಿಷಯಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡವವರು ಯಾರೂ ಇರಲಿಲ್ಲ. ಇದರಲ್ಲೂ ದೇವರ ಕೃಪೆಯಾಗಿ, ನನ್ನ ಸ್ನೇಹಿತನಾದ, IISc (Indian Institute of Science) ನಲ್ಲಿ Ph.D ವಿದ್ಯಾರ್ಥಿಯಾಗಿರುವ ರಜತ್. ವಿ. ಈ ಕೆಲಸಕ್ಕೇ ಮುಂದಾದನು. ನಮ್ಮ ಹಿಂದೂ ಧರ್ಮದ ಬಗ್ಗೆ ಅತ್ಯಂತ ಶ್ರದ್ಧೆ ಹಾಗೂ ಸುಮಾರು ಮಟ್ಟಿಗೆ ಅದರ ಬಗ್ಗೆ ಜ್ಞಾನ ಉಳ್ಳವನಾದ ರಜತ್ ಈ ಕೆಲಸಕ್ಕೇ ಸರಿಯಾದವನೆ ಎಂದು ಒಂದು ಆಂಗ್ಲ ಭಾಷೆಯ ಬ್ಲಾಗನ್ನು ಕೂಡಾ ಪ್ರಾರಂಭಿಸಿದೆ. ಅದು ಇಲ್ಲಿದೆ: http://panchaanga-english.blogspot.com/

ನಾನು ಈ ಕನ್ನಡ ಬ್ಲಾಗಿನಲ್ಲಿ ಬರೆಯುವ ಎಲ್ಲಾ ಲೇಖನಗಳನ್ನು English ಗೆ ಅನುವಾದ ಮಾಡುವುದಾಗಿ ರಜತ್ ಹೇಳಿದ್ದಾನೆ. ಇದಕ್ಕಾಗಿ ರಜತನಿಗೆ ತುಂಬಾ ಧನ್ಯವಾದಗಳು. ಭಾಷೆ ಈಗ ಯಾರಿಗೂ ಅಡ್ಡಿ ಆಗಬಾರದು. English ಬ್ಲಾಗ್ ನಿಂದ ಇನ್ನು ಹೆಚ್ಚಿನ ಜನರಿಗೆ ಈ ವಿಷಯಗಳು ಮುಟ್ಟಲಿ ಎಂದು ಪ್ರಾರ್ಥಿಸುತ್ತೇನೆ.

ಧನ್ಯವಾದಗಳು.

ಶನಿವಾರ, ಮಾರ್ಚ್ 7, 2009

ಪೀಠಿಕೆ -- ಇದು ಏನು, ಯಾರಿಗೆ ಮತ್ತು ಯಾಕೆ ?

ನಮಸ್ಕಾರ,

ಈ ಪುಟವನ್ನು ಓದುವುದಕ್ಕೆ ಬಂದ ನಿಮಗೆ ಸ್ವಾಗತ ಹಾಗೂ ಧನ್ಯವಾದಗಳು.

ನಮಗೆಲ್ಲಾ ಗೊತ್ತಿದ್ದಂತೆ ಹಿಂದೂ ಧರ್ಮ ಬಹಳ ಪುರಾತನವಾದುದು. ನಮ್ಮ ಈ ಧರ್ಮದ ಅಡಿಪಾಯ ವೇದಗಳು. ನಮ್ಮ ಧರ್ಮದಲ್ಲಿ ಎಷ್ಟೋ ಪಂಗಡಗಳಿದ್ದರೂ, ಆ ಪಂಗಡಗಳು ತಮ್ಮದೇ ಆದ ಆಚಾರ ವಿಚಾರಗಳನ್ನು ಇಟ್ಟುಕೊಂಡಿದ್ದರೂ ಅವೆಲ್ಲಾದಕ್ಕೂ ಮೂಲ ವೇದಗಳು ಎಂಬುದು ನನ್ನ ಭಾವನೆ. ಹಿಂದೂಗಳಾಂದತಹ ನಾವು, ಅಥವಾ ವೇದದಲ್ಲಿ ವಿಶ್ವಾಸ - ಗೌರವ ಇರುವ ಯಾವುದೇ ವ್ಯಕ್ತಿಯು ವೇದಗಳಲ್ಲಿ ಉಲ್ಲೇಖಿಸಿರುವ ಆದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಶ್ರೇಯಸ್ಕರ. ಕೇವಲ ದೇವರ ಸ್ತುತಿ ಮಾತ್ರವಲ್ಲದೇ ವೇದಗಳು ನಮ್ಮ ಸಾಮಾಜಿಕ ಜೀವನನದ ಮೇಲೂ ಬೆಳಕು ಚೆಲ್ಲುತ್ತವೆ. ಆದರೆ, ಆನಾದಿ ಕಾಲದಿಂದಲೂ ಇರುವ ಈ ವೇದದ ತಿಳುವಳಿಕೆ ಹಾಗೂ ಅದರ ಪಾಲನೆ ದಿನಗಳೆದಂತೆ ನಿಶ್ಶಕ್ತವಾಗುತ್ತಿದೆ. ಜನರ ಆಲಸ್ಯದಿಂದಲೋ ಅಥವಾ ಅಜ್ಞಾನದಿಂದಲೋ ವೇದಗಳ ಪಠನ, ಅವುಗಳ ಪಾಲನೆ ಕಡಿಮೆಯಾಗುತ್ತಾ ಬಂದಿದೆ. ಎಷ್ಟೋ ಕಡೇ ಅನುಸರಣೆ ಇದ್ದರೂ ಅದು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಸರಿಯಾಗಿ ಆದರೂ ಆಚರಣೆಗಳ ಕಾರಣ ಅಥವಾ ಮಹತ್ವ ಗೊತ್ತಿಲ್ಲ. ದಿನಗಳೆದಂತೆ ವೇದಗಳ ಮಹತ್ವ ಕಡಿಮೆಯಾಗುತ್ತಿದೆ ಹಾಗೂ ಅವುಗಳ ಆಚರಣೆಗಳಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿದ್ದು ಸರಿಯಾದ ಕ್ರಮ ಯಾವುದೆಂದು ತಿಳಿಯದೇ ಅವರವರ ಭಾವನೆಗೆ ತಕ್ಕಂತೆ ಆಚರಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈಗಿನ ಆಧುನಿಕ ಜೀವನ ಶೈಲಿ ಹಬ್ಬಗಳ ಆಚರಣೆಗಳನ್ನೂ ಕ್ರಮೇಣವಾಗಿ ದೂರ ಮಾಡುತ್ತಿದೆ. ಕೆಲಸಕ್ಕಾಗಿಯೋ, ಕಲಿಯುವುದಕ್ಕಾಗಿಯೋ ಮತ್ತಿನ್ಯಾವುದೋ ಕಾರಣದಿಂದಲೋ ದೂರದೇಶಕ್ಕೇ ಹೋಗಿ, ಮನೆಯ ಹಿರಿಯರಿಂದ ದೂರವಾಗಿರುವಂತಹ ನವ ಪೀಳಿಗೆಗೆ ಹಿರಿಯರಿಂದ ಕಲಿಯಬೇಕಾದಂತಹ ಎಷ್ಟೋ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಗೊತ್ತೇ ಆಗುವುದಿಲ್ಲ. ಹಾಗಾಗಿ ಆ ವಿಚಾರಗಳ ಹಸ್ತಾಂತರ ಆಗುತ್ತಿಲ್ಲ. ನಾನೂ ಸಹ ಇಂತಹ ಹೊಸ ಪೀಳಿಗೆಗೆ ಸೇರಿದವನು. ಆದರೆ ನಮ್ಮೆಲ್ಲಿರಗೂ ಈ ವಿಚಾರಗಳು ತಿಳಿದಿರಬೇಕು, ನಾವೂ ಸಹ ಅವುಗಳನ್ನು ಪಾಲಿಸಬೇಕು ಅನ್ನುವ ಅಭಿಪ್ರಾಯ ನನ್ನದು.

ನಮ್ಮ ಪೀಳಿಗೆಯ ಇನ್ನೊಂದು ವಿಶೇಷತೆ ಏನೆಂದರೇ, ನಾವು ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತೇವೆ. ಮಾಡಲು ಹೇಳಿದ ಕೆಲಸವನ್ನು ಇದೇ ರೀತಿ ಯಾಕೆ ಮಾಡಬೇಕು ಅಂತ ಕೇಳುತ್ತೇವೆ. ಸರಿಯಾಗಿ ಅರಿಯದೇ, ಮನಃಪೂರ್ವಕವಾಗಿ ಆ ಕೆಲಸವನ್ನು ಮಾಡಲು ನಾವು ಒಪ್ಪುವುದಿಲ್ಲ. ಯಾರಾದರೂ ಧರ್ಮದ ಬಗ್ಗೆ ಯಾವುದೇ ವಿಷಯವನ್ನು ಹೇಳಿದರೆ ಅದನ್ನು ಒಪ್ಪದೇ ಪ್ರಶ್ನಿಸುತ್ತೇವೆ. ಆದರೇ ನಮ್ಮ ಸನಾತನ ಹಿಂದೂ ಧರ್ಮ ಒಂದು ದಿನದಲ್ಲಿ ತಿಳಿಯುವಷ್ಟು ಸರಳವಾದುದಲ್ಲ. ಜೀವನದ ಪ್ರತಿಯೊಂದು ಕಾರ್ಯಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರಗಳಿವೆ. ಅವುಗಳೆಲ್ಲದರ ಅಧ್ಯಯನಕ್ಕೆ ಹತ್ತಾರು ವರ್ಷಗಳೇ ಬೇಕು. ಉತ್ತರ ಬೇಕೆನ್ನುವ ನಾವು ಅಷ್ಟು ಕಾಲ ಅವುಗಳ ಅಧ್ಯಯನಕ್ಕೆ ಮೀಸಲಿಡುವುದು ಕಷ್ಟ. ಆದರೆ ಉತ್ತರಗಳು ಬೇಕು - ಈ ಪರಿಸ್ಥಿತಿಗೇ ಪರಿಹಾರ ತರಬೇಕೆಂದೇ ನಾನು ಈ ಬ್ಲಾಗ್ (Blog) ಬರೆಯಲು ನಿರ್ಧರಿಸಿದೆ.

ಅದರೇ ಮೊದಲೇ ಹೇಳಿದಂತೆ ಈ ವಿಚಾರಗಳಲ್ಲಿ ನನ್ನ ಜ್ಞಾನವೂ ಅಷ್ಟಕಷ್ಟೇ. ಯಾವುದೇ ಸತ್ಕಾರ್ಯಕ್ಕೇ ದೇವರ ಅನುಗ್ರಹ ಇದ್ದೇ ಇರುತ್ತೇ ಅನ್ನುವ ಮಾತಿಗೆ ಸಾಕ್ಷಿಯಾಗಿ ನನಗೆ ಈ ಬ್ಲಾಗ್ ವಿಚಾರ ಬಂದಾಗ, ಶ್ರೀ ದೇವರ ಕೃಪೆಯಿಂದ ಸುಧಾ ಪಂಡಿತರಾದ, ಧಾರವಾಡ ನಗರದ ಶ್ರೀ || ಶ್ರೀಕಾಂತಾಚಾರ್ಯ ಬಿದರಕುಂದಿಯವರ ಪರಿಚಯವಾಯಿತು. ಧರ್ಮಜ್ಞಾನಿಗಳಾದ ಇವರಿಗೆ ನನ್ನ ವಿಚಾರವನ್ನು ತಿಳಿಸಿದೆ. ಅವರಿಗೂ ಇದು ಸರಿಯಾದ ವಿಚಾರವೆಂದನಿಸಿ, ಆಗಲಿ ಎಂದು ಆಶೀರ್ವದಿಸಿದರು. ಈಗ ಈ ಬ್ಲಾಗಿನಲ್ಲಿ ಬರೆಯಲು ನನಗೆ ಬೇಕಾದ ಮಾಹಿತಿಯನ್ನು ಶ್ರೀಯುತರು ಒದಗಿಸಿಕೊಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಾ ಈ ಬ್ಲಾಗ್ ಜನರಿಗೆ ಉಪಯುಕ್ತವಾಗಲಿ, ಜನರು ಇದನ್ನು ಓದಿ ಹೆಚ್ಚು ಧಾರ್ಮಿಕರಾಗಲಿ ಎಂದು ಆಶೀರ್ವದಿಸಲು ಕೋರುತ್ತೇನೆ.

ಇನ್ನು ಈ ಬ್ಲಾಗಿನಲ್ಲಿ ಏನೇನು ಬರೆಯುತ್ತೇನೆ ಅನ್ನುವುದರ ಬಗ್ಗೇ ಒಂದು ಚಿಕ್ಕ ಪರಿಚಯ :

೧) ಮೊಟ್ಟ ಮೊದಲಿಗೆ ಹಿಂದೂ ಪಂಚಾಂಗದ ಪ್ರಕಾರ ಬರುವ ಹಬ್ಬಗಳು, ಅವುಗಳ ಆಚರಣೆ ಮತ್ತು ಆ ಆಚರಣೆಯ ಹಿಂದಿರುವ ಉದ್ದೇಶ.
ಈ ಮಾಹಿತಿಯನ್ನ ಕೆಳಗಿನ ವಿಭಾಗಗಳಲ್ಲಿ ತಿಳಿಸಲು ಪ್ರಯತ್ನಿಸುತ್ತೇನೇ -
  • ಮಾಸಪಕ್ಷ – ತಿಥಿ
  • ದಿನದ ಮಹತ್ವಶಾಸ್ತ್ರದ ಯಾವ ಭಾಗದಲ್ಲಿ (ಅಂದರೇ ಪುರಾಣದಲ್ಲೋ, ಉಪನಿಷತ್ತಿನಲ್ಲೋ, ಇತ್ಯಾದಿ) ಇದರ ಉಲ್ಲೇಖ ಇದೆ ಮತ್ತು ಯಾಕೆ ಮಾಡಬೇಕೆಂದು ಅಲ್ಲಿ ಹೇಳಿದ್ದಾರೆ.
  • ಹಬ್ಬವನ್ನ ಯಾವ ರೀತಿ ಆಚರಿಸಬೇಕು, ಯಾವ ರೀತಿ ಆಚರಿಸಬಾರದು (ಈಗಿರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳು)
  • ಹಾಗೂ ಪ್ರತಿ ಆಚರಣೆಯ ಪದ್ಧತಿಗೂ ಕಾರಣ ಹಾಗೂ ಮಹತ್ವ.
ಇವುಗಳ ಜೊತೆ ಇನ್ನೂ ಏನಾದರು ಸೇರಿಸಬಹುದು ಎಂದನಿಸಿದರೆ ನಮಗೆ ತಿಳಿಸಿ. ಸಾಧ್ಯವಾದಷ್ಟು ಮಾಹಿತಿಯನ್ನು ಇಲ್ಲಿ ಕೊಡಲು ಪ್ರಯತ್ನಿಸುತ್ತೇವೆ.

೨) ಹಬ್ಬಗಳ ಜೊತೆ ನಮ್ಮ ದಿನನಿತ್ಯದ ಕಾರ್ಯಗಳನ್ನಾಗಲಿ, ಅಥವಾ ಕೆಲವು ವಿಶೇಷ ಕಾರ್ಯಗಳನ್ನಾಗಲಿ ಹೇಗೇ ಮಾಡಬೇಕು ಅಂತ ವೇದಗಳ ಅಂಗವಾದ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಜೋತಿಷ್ಯ ಶಾಸ್ತ್ರದ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ನಾನಾ ವಿಧವಾದ ವಿಚಾರಗಳಿವೆ. ಆದರೆ ಅದು ನಿಜಕ್ಕೂ ವೇದದ ಒಂದು ಅಂಗ, ಅದಕ್ಕೆ ಅರ್ಥವಿದೆ ಮತ್ತು ಅದರಲ್ಲಿ ಹೇಳಿರುವ ವಿಚಾರಗಳು ಸರಿ ಎಂದು ನನಗನಿಸಿ ಅದನ್ನು ಇಲ್ಲಿ ಸೇರಿಸುತ್ತಿದ್ದೇನೆ. ಜೋತಿಷ್ಯ ಅಂದರೆ ನಾನಿಲ್ಲಿ ಯಾರ ಭವಿಷ್ಯ ಹೇಳುವುದಿಲ್ಲ, ರಾಶಿ ನಕ್ಷತ್ರ ನೋಡಿ ಫಲ ಹೇಳೋದಿಲ್ಲ. ಇಲ್ಲಿ ವರ್ಷದ ಒಂದು ಮಾಸದ ಈ ದಿನ ಯಾವ ಕಾರ್ಯಕ್ಕೇ ಶುಭ, ಯಾವುದಕ್ಕೆ ಅಶುಭ ಎಂಬ ವಿಚಾರವನ್ನು ತಿಳಿಸಲಾಗುತ್ತದೆ. ಇದರೊಂದಿಗೆ ಮತ್ತಿತರ ಅಗತ್ಯ ಮಾಹಿತಿಗಳನ್ನು ಪ್ರಕಟಿಸುತ್ತೇನೆ.

ನಿಮಗೆ ನಿಮ್ಮ ರಾಶಿ, ನಕ್ಷತ್ರಗಳ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಾದಲ್ಲಿ, ಕುಂಡಲಿ, ಜಾತಕ, ಫಲ, ಕಷ್ಟ ಪರಿಹಾರದಂತಹ ವಿಶಯಗಳಲ್ಲಿ ಸಹಾಯ ಬೇಕಾದಲ್ಲಿ ಜೋತಿರ್ಜ್ಞಾನಿಗಳಾದ ಶ್ರೀ ಶ್ರೀಕಾಂತಾಚಾರ ಬಿದರಕುಂದಿ, ಧಾರವಾಡ ಇವರನ್ನು ಸಂಪರ್ಕಿಸಬಹುದು. ಇವರ ಸಂಪರ್ಕ ವಿವರಗಳು ಇದೇ ಪುಟದ ಪ್ರಾರಂಭದಲ್ಲಿವೆ.

ಈ ಎಲ್ಲಾ ಮಾಹಿತಿಯನ್ನು ಮಾಸ-ಪಕ್ಷ-ತಿಥಿ ಪ್ರಕಾರವಾಗಿ ಪ್ರಕಟ ಮಾಡಲಾಗುತ್ತದೇ. ಹಾಗಾಗಿ ಬರುವ ಯುಗಾದಿ, ಅಂದರೇ ಬರುವ ಚೈತ್ರ ಮಾಸದ, ಶುಕ್ಲ ಪಕ್ಷದ, ಪ್ರಥಮ ದಿನವಾದ ಪ್ರತಿಪದ ದಿನದಿಂದ ಆರಂಭಿಸಬೇಕೆಂದು ನಿರ್ಧರಿಸಿದ್ದೇವೆ. ಆಂಗ್ಲ ಕ್ಯಾಲೆಂಡರ್ (English Calendar) ಪ್ರಕಾರ ಯುಗಾದಿ ಇದೇ ತಿಂಗಳು March-27 ರಂದು ಇದೆ. ಅದಕ್ಕಿಂತ ಕನಿಷ್ಠ ಪಕ್ಷ ಎರಡು ಅಥವಾ ಮೂರು ದಿನಗಳ ಮುಂಚಿತವಾಗಿಯೇ ಚೈತ್ರ ಮಾಸದ ಮಾಹಿತಿಯನ್ನು ಪ್ರಕಟ ಮಾಡುತ್ತೇವೆ. ಸಾಧ್ಯವಾದಲ್ಲಿ ಅದಕ್ಕಿಂತ ಬೇಗನೇ ಒದಗಿಸಲು ಪ್ರಯತ್ನಿಸುತ್ತೇವೆ. ಮುಂದುವರೆದಂತೆ ಕ್ರಮೇಣ ಒಂದೊಂದಾಗಿ ಎಲ್ಲಾ ಮಾಸಗಳ ವಿವರಗಳನ್ನು ಪ್ರಕಟಿಸುತ್ತೇವೆ.

ಮತ್ತೆ ಮತ್ತೆ ಈ ಪುಟವನ್ನು ಓದಲು ಬನ್ನಿ, ಹೊಸ ವಿಚಾರಗಳನ್ನ ತಿಳಿಯಿರಿ ಇತರರಿಗೆ ತಿಳಿಸಿ, ನಿಮ್ಮ ಅಭಿಪ್ರಾಯವನ್ನೂ ಬರೆಯಿರಿ.

ಅದೆಲ್ಲದರ ಜೊತೆ ಬರುವ ಹೊಸ ವರ್ಷದಿಂದ, ಅಂದರೇ ಯುಗಾದಿಯಿಂದ ಇಲ್ಲಿರುವ ವಿಷಯಗಳನ್ನ ಓದಿ, ನಿಮಗೇ ಸಮಂಜಸವೆನಸಿದಲ್ಲಿ ಅದನ್ನು ಪಾಲಿಸಿ ಇನ್ನು ಧಾರ್ಮಿಕರಾಗಿ.

ಓದುಗರಲ್ಲಿ ನಮ್ಮ ಕೋರಿಕೆ : ಈ ಬ್ಲಾಗಿನ ವಿಚಾರವನ್ನು ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಮತ್ತು ಇತರ ಪರಿಚಯದವರಿಗೆ ತಿಳಿಸಿ, ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವಲ್ಲಿ ನಮ್ಮೊಡನೆ ಸಹಕರಿಸಬೇಕಾಗಿ ವಿನಂತಿ.