ಸೋಮವಾರ, ಮಾರ್ಚ್ 23, 2009

ಹನುಮ ಜಯಂತಿ ಮಹತ್ವ

ಹನುಮ ಜಯಂತಿ

ಚೈತ್ರ - ಹುಣ್ಣಿಮೆ ------ ದವನದ ಹುಣ್ಣಿಮೆ

ಈ ಸಲ ೯-೦೪-೨೦೦೯, ಗುರುವಾರ, ಹಸ್ತಾ ನಕ್ಷತ್ರ, ಬ್ಯಾಘ್ಯಾತಯೋಗ, ಭದ್ರಾಕರಣ ಇಂದು ಚೈತ್ರ ಶುದ್ಧ ಹುಣ್ಣಿಮೆಯ ದಿನ ಮುಂಜಾನೆ ೬:೧೬ (6:16) ಸೂರ್ಯೋದಯ ಆದ ಸಮಯದಲ್ಲಿ ಶ್ರೀರಾಮಚಂದ್ರನ ಸರಮ ಭಕ್ತನಾದ ಹನಮಂತನು ಅವತಾರ ಮಾಡಿದ ದಿನ. ಈ ದಿನ ಬಹಳ ಮಹತ್ವದ್ದು. ಹನುಮಂತನ ತಂದೆ ಕೇಸರಿ ಎಂಬ ಶ್ರೇಷ್ಠ ಕಪಿ, ತಾಯಿ ಅಂಜನಾದೇವಿ, ಒಳ್ಳೆಯ ಸಾಧ್ವಿ. ಅವಳು ಋಷಿಗಳ ಅನುಮತಿಯಿಂದ ಇವನನ್ನು ಪಡೆದಳು, ಆದ್ದರಿಂದ ಇವನಿಗೆ ಆಂಜನೇಯ ಎಂದು ಕರೆಯುವುದುಂಟು. ಹನುಮಂತ ದೇವರ ಸ್ಮರಣೆ ನಮಗೆಲ್ಲ ಒಂದು ವಿಶೇಷವಾದ ಶಕ್ತಿಯನ್ನು ತುಂಬಿಕೊಂಡಹಾಗೆ, ಆ ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿ. ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಅವನ ಅನೇಕ ವಿಧವಾದ ಶಕ್ತಿಯನ್ನು ನಾವು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಎಲ್ಲ ಅವಸ್ಥೆಯಲ್ಲಿಯೂ ಅವನನ್ನು ಸ್ಮರಿಸುವುದು ಅವಶ್ಯಕ. ಶಾಸ್ತ್ರಗಳಲ್ಲಿ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಅನೇಕ ಬಾರಿ ಉಲ್ಲೇಖ ಇದೆ. ಅದರಲ್ಲಿ ಕೆಲವು ಈ ರೀತಿಯಾಗಿವೆ:

ಉತ್ತಮ ಬುದ್ಧಿವಂತನಾಗುವುದಕ್ಕೆ, ಶಾರೀರಿಕ ಬಲ ಮತ್ತು ಮಾನಸಿಕ ಬಲ ಇವೆರಡೂ ಬೇಕು, ಅಮ ಸಂಪಾದನೆ ಮಾಡುವುದಕ್ಕೆ, ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವುದಕ್ಕಾಗಿ ಮತ್ತು ಈಗಿನ ಒಂದು ದಿನದ ಪ್ರತಿ ಹಂತ ಹಂತದಲ್ಲೂ ನಮ್ಮಲ್ಲಿ ಧೈರ್ಯ ಕಡಿಮೆಯಾಗುತ್ತಲಿದೆ (ಅದಕ್ಕೆ ಕಾರಣಗಳು ಅನೇಕ, ಅದನ್ನು ಇಲ್ಲಿ ಮೆಲಕು ಹಾಕುವುದು ಬೇಡ) - ಆ ಧೈರ್ಯ ಕುಂದದೆ ಇರುವುದಕ್ಕೆ, ಭಯರಹಿತವಾದ ಜೀವನವನ್ನು ಸಾಧಿಸುವುದಕ್ಕೆ, ನಮ್ಮ ನಮ್ಮ ಧರ್ಮವನ್ನು ಆಚರಿಸದೆ ಇರುವುದಕ್ಕೆ ಕಾರಣವಾದ ನಮ್ಮಲ್ಲಿರುವ ಆಲಸ್ಯತನವು - ಅದನ್ನು ದೂರ ಮಾಡುವುದಕ್ಕೆ, ಮಾತು ಎಲ್ಲರಿಗೂ ಬೇಕು, ಅದಿಲ್ಲದೆ ಜೀವನ ಬಹಳ ಕಷ್ಟ - ಅದರ ಸಂಪಾದನೆಗೂ, ರಾಮನ ಭಕ್ತನಾದ ಹನುಮಂತ, ಆಂಜನೇಯನ ಸ್ಮರಣೆ, ಪ್ರಾರ್ಥನೆ ಇದು ಅತ್ಯಾವಶ್ಯಕ.

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ
ಅಜಾಡ್ಯಂ ವಾಕ್ ಪಟು ತ್ವಂ ಚ ಹನುಮತ್ ಸ್ಮರಣಾತ್ ಭವೇತ್.

ಈ ಶ್ಲೋಕವನ್ನು ಎಲ್ಲರೂ ಪ್ರತಿನಿತ್ಯ ಹೇಳಬೇಕು. ಅದರಲ್ಲಿಯೂ ಹನುಮ ಜಯಂತಿಯ ದಿನ ಮರೆಯುವಹಾಗಿಲ್ಲಾ. ಕಿರಿಯರಿಂದ ಹಿಡಿದು ಮನೆಯ ಅತಿ ಹಿರಿಯರಾದವರೆಲ್ಲರೂ ಮನೆಯಿಂದ ಹೊರಡುವ ಮುಂಚೆ ಈ ಸ್ತೋತ್ರವನ್ನು ಹೇಳಿ ಹೊರಡಬೇಕು. ಇದರಿಂದ ಕಾರ್ಯಸಿದ್ಧಿ ಬೇಗ ಆಗುವುದಲ್ಲದೇ ಯಾವುದೇ ಗ್ರಹಗಳ ಭಾದೆ ಆಗುವುದಿಲ್ಲಾ. (ಹನುಮಂತನ ಸ್ಮರಣೆಯಿಂದ ಗ್ರಹಗಳ ಭಾದೆ ಆಗದೆ ಇರುವುದಕ್ಕೆ ಕಾರಣ ಏನು ಎಂಬುದನ್ನು ಆದಷ್ಟು ಬೇಗ ಇಲ್ಲಿ ತಿಳಿಸುತ್ತೇವೆ.) ಇದೆಲ್ಲದರ ಜೊತೆ ಹನುಮ ಜಯಂತಿಯ ದಿನ ಎಲ್ಲರೂ ಹತ್ತಿರದ ದೇವಸ್ಧಾನಕ್ಕೆ ಹೋಗಿ ಪೂಜಾದಿಗಳನ್ನು ಸಲ್ಲಿಸಬೇಕು.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ರಾಮ ನವಮಿ ಮಹತ್ವ

ರಾಮ ನವಮಿ

ಚೈತ್ರ - ಶುಕ್ಲ - ನವಮಿ

ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

ಈ ಚೈತ್ರ ಶುಕ್ಲದಲ್ಲಿ ರಾಮ ಅವತಾರ ಮಾಡಿದ ದಿನವು ಬರುತ್ತದೆ. ಅದು ರಾಮನವಮಿ. ರಾಮ ಅವತಾರ ಮಾಡಿದ್ದು ಮಧ್ಯಾಹ್ನದ ಕಾಲದಲ್ಲಿ. ಅವನು ಅಂತಹ ಬಿಸಿಲಿನಲ್ಲಿ ಅವತರಿಸಿದ್ದರೂ ಚಂದ್ರನಂತೆ ಶಾಂತನಾಗಿದ್ದ. ದೇಶದೆಲ್ಲಡೆ ಬಹು ವಿಜೃಂಭಣೆಯಿಂದ ರಾಮನವಮಿ ಉತ್ಸವವನ್ನು ಆಚರಿಸುತ್ತಾರೆ. ಯಾರ ಮನೆ ದೇವರು ರಾಮಚಂದ್ರನಾದಿದ್ದಾನೋ ಅವರು ಚೈತ್ರ ಶುಕ್ಲ ಪ್ರತಿಪದದಿಂದ ನವರಾತ್ರಿ ದೀಪ ಹಾಕುತ್ತಾರೆ. ಇದಕ್ಕೆ ರಾಮ ನವರಾತ್ರಿ ಎಂದು ಕರೆಯುತ್ತಾರೆ.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಗೌರಿ ತೃತಿಯಾ ಮಹತ್ವ

ಗೌರಿ ತೃತಿಯಾ

ಚೈತ್ರ ಶುಕ್ಲ ತೃತಿಯಾದಿಂದ ವೈಶಾಖ ಶುಕ್ಲ ತೃತಿಯಾ ವರೆಗೆ , ಒಂದು ತಿಂಗಳ ಕಾಲ ಗೌರಿಯನ್ನು ಪೂಜಿಸಲಾಗುತ್ತದೆ. ಶಿವ - ಪಾರ್ವತಿಯರ ಪೂಜೆಯನ್ನು ಮಾಡಬೇಕು. ಸುವಾಸಿನಿ ಸ್ತ್ರೀಯರಿಗೆ ಉಡಿ ತುಂಬಬೇಕು. ಪಾನಕ ಮತ್ತು ಕೋಸಂಬರಿಗಳನ್ನು ಕೊಡಬೇಕು. ಈ ಒಂದು ತಿಂಗಳು ಸಮಯದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ಈ ಸಾಮೂಹಿಕ ಆಚರಣೆಯನ್ನು ಮಾಡಲಾಗುತ್ತದೆ.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಯುಗಾದಿಯ ಮಹತ್ವ

ಯುಗಾದಿ

ವಸಂತ ಋತು - ಚೈತ್ರ ಮಾಸ - ಶುಕ್ಲ ಪಕ್ಷ - ಪ್ರತಿಪದ

ಈ ದಿನದ ಮಹತ್ವ:

ಈ ಯುಗಕ್ಕೆ ಆದಿಯಾದ ದಿನವೇ ಯುಗಾದಿ. ಅದು ಚೈತ್ರ ಶುಕ್ಲ ಪ್ರತಿಪದ. ಈ ದಿನ ಬದಳ ಮಹತ್ವವಾದದ್ದು. ಇದು ಹೊಸ ವರ್ಷದ ಮೊದಲನೇಯ ದಿನ. ಕತ್ತಲೆ ಕಳೆದ ಮೇಲೆ ಬರುವುದೇ ಬೆಳಕು. ಹಾಗೆಯೇ ಅಮವಾಸ್ಯೆ ಕಳೆದ ಕೂಡಲೆ ಎಲ್ಲರಿಗೂ ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಒಳ್ಳೆಯ ಚೈತನ್ಯ ಬರಲಿ ಎಂದು ಪ್ರಾರ್ಥಿಸಬೇಕಾದ ದಿನ ಈ ಯುಗಾದಿ. ಯುಗಾದಿಯಿಂದ ಒಂದು ಹೊಸ ಸಂವತ್ಸರ ಪ್ರಾರಂಭವಾಗುತ್ತದೆ. ಇದೇ ನಮ್ಮ ಹಿಂದೂ ಪಂಚಾಗದ ಪ್ರಕಾರ ನಮ್ಮೆಲ್ಲರಿಗೂ ಹೊಸ ವರ್ಷ. ಕ್ರಿಸ್ತ ಶಖೆ ೨೦೦೯ರ ಮಾರ್ಚ-೨೭ ರಂದು ಬರುವ ಯುಗಾದಿಯಿಂದ "ವಿರೋಧಿನಾಮ ಸಂವತ್ಸರ" ಎಂಬ ಸಂವತ್ಸರ ಪ್ರಾರಂಭವಾಗಲಿದೆ. ಇದೇ ಸಂದರ್ಭದಲ್ಲಿ ಸಂವತ್ಸರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮ ಧರ್ಮದಲ್ಲಿ ಪ್ರತಿ ಸಂವತ್ಸರಕ್ಕೆ (ಅಂದರೆ ಪ್ರತಿ ವರ್ಷಕ್ಕೆ) ಒಂದೊಂದು ಹೆಸರು ಕೊಡಲಾಗಿದೆ. ಸಂವತ್ಸರಗಳು ಒಟ್ಟು ೬೦ (60) ಇದ್ದು, ಅವು ಒಂದಾದ ಮೇಲೊಂದು ಬರುತ್ತವೆ. ಈ ಹಿಂದೆ ಕಳೆದುದು (ಅಂದರೆ ೨೬-ಮಾರ್ಚ-೨೦೦೯ ವರೆಗು ಒಂದು ವರ್ಷ ಕಾಲ ಕಳೆದ ಸಂವತ್ಸರ) "ಸರ್ವಧಾರಿ ನಾಮ ಸಂವತ್ಸರ". ಪ್ರತಿ ಸಂವತ್ಸರವು ಚೈತ್ರ ಶುದ್ಧ ಪ್ರತಿಪದದಿಂದ, ಫಾಲ್ಗುಣ ಕೃಷ್ಣ ಅಮವಾಸ್ಯದ ವರೆಗೆ ಒಂದೊಂದಾಗಿ ಬರುತ್ತವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ ಒಬ್ಬ ೬೦ ವರ್ಷದ ವ್ಯಕ್ತಿ ಹಿಂದೂ ಪಂಚಾಂಗದ ಎಲ್ಲ ಸಂವತ್ಸರಗಳನ್ನು ನೋಡಿರುತ್ತಾನೆ. ಈ ನಿಮಿತ್ತವಾಗಿ ಕೆಲವು ಮನೆಗಳಲ್ಲಿ "ಶಷ್ಟಾಬ್ದಿ" (೬೦ ವರ್ಷದ ಶಾಂತಿ) ಆಚರಿಸುವ ಸಾಂಪ್ರದಾಯಿಕ ಪದ್ಧತಿಯು ಇದೆ. ಅದರ ಬಗ್ಗೆ ವಿವರವಾಗಿ ಇನ್ನೊಂದು ಕಡೆ ಬರೆಯುತ್ತೇನೆ,

ಯುಗಾದಿಯ ದಿನ ಆಚರಿಸಬೇಕಾದ ಕಾರ್ಯಕ್ರಮಗಳು:

ಚೈತ್ರ ಶುಕ್ಲ ಪ್ರತಿಪದ ಮುಂಜಾನೆ ಎದ್ದು ಶಾಂತವಾದ ಮನಸ್ಸಿನಿಂದ ಹಿರಿಯರು ಹೇಳಿದ ಹಾಗೆ ಕೇಳುತ್ತಾ ತುಪ್ಪದ ಪಾತ್ರೆಯಲ್ಲಿ ಮುಖವನ್ನು ನೋಡಿ ಅಮೇಲೆ ಕನ್ನಡಿಯಲ್ಲಿ ಮುಖವನ್ನು ವೀಕ್ಷಿಸಬೇಕು. ಬಂಧು ಬಾಂಧವರಿಂದ ಕೂಡಿಕೊಂಡು ಅಭ್ಯಂಗ ಸ್ನಾನ ಮಾಡಿ, ಪೂಜಾದಿಗಳನ್ನು ಪೂರೈಸಿ ಹೊಸ ಬಟ್ಟೆಗಳನ್ನು ತೊಟ್ಟು, ದೈವಜ್ಞರಿಂದ, ಅಂದರೆ ಶಾಸ್ತ್ರಜ್ಞ ಜೋತಿಷಿಗಳಿಂದ ಆ ವರ್ಷದ ಫಲಗಳನ್ನು ಕೇಳಿ ತಿಳಿಯಬೇಕು. ಇದು ಅಲ್ಲದೇ ಇನ್ನೊಂದು ಸಂಪ್ರದಾಯವಿದೆ. ಮುಂಜಾನೆ ಎದ್ದಾಕ್ಷಣ ಪಂಚಾಂಗ ಶ್ರವಣ ಮಾಡುವವರು ಇದ್ದಾರೆ. ಎರಡೂ ಒಳ್ಳೆಯ ಮಾರ್ಗಗಳೇ. ಇದರ ಜೊತೆ ಈ ಕೆಳಗಿನ ಪದ್ಧತಿಗಳನ್ನು ಆಚರಿಸಬೇಕು.

೧) ಪಂಚಾಂಗ ಪೂಜೆಯನ್ನು ಮಾಡಬೇಕು.
೨) ಗುರು-ಹಿರಿಯರಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದವನ್ನು ಸ್ವೀಕರಿಸಬೇಕು
೩) ಮನೆಯವರೆಲ್ಲರೂ ಸೇರಿ "ಬೇವು-ಬೆಲ್ಲ" ಸ್ವೀಕಾರ ಮಾಡಬೇಕು. --- ಬೇವು, ಇದು ದುಃಖದ - ಪಾಪದ ಸಂಕೇತ. ಬೆಲ್ಲ, ಇದು ಪುಣ್ಯದ-ಸುಖದ ಸಂಕೇತ. ಈ ಎರಡೂ ಅವಸ್ಥೆಯನ್ನು ಅತ್ಯಂತ ಧೈರ್ಯವಾಗಿ ಎದರಿಸುತ್ತೇನೆ ಎಂದು ಯುಗಾದಿಯ ದಿನವೇ ಪ್ರತಿಜ್ಞೆಗೈಯುವ ಒಂದು ಕೆಲಸ.
೪) ತೈಲಾಭ್ಯಂಗನ ಅವಶ್ಯವಾಗಿ ಮಾಡಲೇಬೇಕು. ತೈಲಸ್ನಾನದ ಮಹತ್ವವನ್ನು ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ:
ವಸಂತ ಋತುವಿನ ಮೊದಲನೆಯ ದಿನವಾದ ಬಲಿ ಪ್ರತಿಪದಾ ದಿನದಂದು ಯಾವನು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದಿಲ್ಲವೋ ಅವನು ದರಿದ್ರನು ಹಾಗೂ ಮಹಾನರಕಗಾಯಿಯಾಗಿತ್ತಾನೆ ಎಂದು ವಸಿಷ್ಠಸ್ಮುತಿಯಲ್ಲಿ ಹೇಳಲಾಗಿದೆ.

ಚೈತ್ರ ಮಾಸದ ಮಹತ್ವ

ಚೈತ್ರ ಮಾಸದ ಮದತ್ವ

ಭವಿಷ್ಯೊತ್ತರ ಪುರಾಣದಲ್ಲಿ ಬಂದ ಚೈತ್ರಮಾಸದ ವಿಚಾರದಲ್ಲಿ ಈ ರೀತಿಯಾಗಿ ವರ್ಣನೆ ಇದೆ:

ವೈಶಾಖಾತ್ ಕಾರ್ತಿಕಃ ಶ್ರೇಷ್ಠಃ ಕಾರ್ತಿಕಾತ್ ಮಾಘ ಎವ ಚ
ಮಾಘಮಾಸಾದ್ ವರಶ್ಚಾಯಂ ಚೈತ್ರಮಾಸೋ ಭವಿಷ್ಯತಿ.

ವೈಶಾಖಕ್ಕಿಂತ ಕಾರ್ತಿಕ ಶ್ರೇಷ್ಠ ಕಾರ್ತಿಕಕ್ಕಿಂತ ಮಾಘ ಶ್ರೇಷ್ಠ ಮಾಘ ಮಾಸಕ್ಕಿಂತಲೂ ಚೈತ್ರ ಇದು ಶ್ರೇಷ್ಠ. ಈ ಮಾಸದಲ್ಲಿ ಮಾಡಿದ ಸತ್ಕಾರ್ಯ, ಸತ್ ಪಾತ್ರರಿಗೆ ದಾನಮಾಡಿದ್ದು, ಯಜ್ಞಯಾಗಾದಿಗಳನ್ನು ಮಾಡಿದ್ದು, ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿದ್ದು, ಶಾಸ್ತ್ರ ವಿಚಾರ ಮಾಡಿದ್ದು ಎಲ್ಲವೂ ಕೋಟಿ ಪಟ್ಟು ಅಧಿಕ ಫಲಪ್ರದವಾಗುತ್ತದೆ. ಅದರಲ್ಲಿಯೂ ಇವೆಲ್ಲವನ್ನು ಅಯೋಧ್ಯದಲ್ಲಿ ಮಾಡಿದರೆ ಇನ್ನೂ ವಿಶೇಷ.

ಹನ್ನೆರಡು ಮಾಸಗಳಲ್ಲಿ ಮೊದಲನೆಯಾದ ಈ ಚೈತ್ರ ಮಾಸವು ಸಕಲ ಜೀವರಾಶಿಗೆ ಇಷ್ಟವಾದುದನ್ನು ಕೊಡುತ್ತಾ ತಾಯಿಯಂತೆ ಶೋಭಿಸುತ್ತದೆ. ಧರ್ಮಪ್ರವರ್ತಕರಾದ ಪ್ರಭು ಶ್ರೀ ರಾಮಚಂದ್ರನು ಈ ಮಾಸದಲ್ಲಿ ಅವತರಿಸಲು, ಸಂತುಷ್ಟರಾದ ದೇವತೆಗಳು ಹಾಗೂ ಸಜ್ಜನರೆಲ್ಲರೂ ದೇವದೇವೋತ್ತಮರಾದ ಆ ಪುರಾಣ ಪುರುಷನನ್ನು ವಿವಿಧ ರೀತಿಯಿಂದ ಸ್ತುತಿಸಿದರು. ಗೀತ - ವಾದ್ಯ- ನೃತ್ಯಗಳೊಂದಿಗೆ ಪ್ರಸನ್ನಗೊಳಿಸಿದರು. ಚೈತ್ರ ಮಾಸದ ಹಿರಿಮೆಯನ್ನು ಕೊಂಡಾಡಿ, ಆ ಮಾಸಕ್ಕೆ ವಿಶೇಷವಾದ ವರದಾನ ಕೊಡುವಂತೆ ಪ್ರಾರ್ಥಿಸಿದರು. ಆಗ ಪ್ರಸನ್ನನಾದ ಶ್ರೀರಾಮಚಂದ್ರನು -

ಸರ್ವೇಷಾಮೇವ ಮಾಸಾನಾಂ ಶ್ರೇಷ್ಠಾಶ್ಚಾಯಂ ಭವಿಷ್ಯತಿ
ಅಯೋಧ್ಯಾಯಾಂ ರಾಮತೀರ್ಥ ಸರಯಾಜಲ ಮಧ್ಯಗೇ
ಚೈತ್ರಸ್ನಾನಂ ಪ್ರರುರ್ವಾಣಾ ಸ್ತ್ರೀ ನರಾ ಮೋಕ್ಷಭಾಗಿನಃ

ಎಲ್ಲ ಮಾಸಗಳಿಗೆ ತಾಯಿಯಂತೆ ಇರುವ ಚೈತ್ರ ಮಾಸವು ಮಾಸಗಳಲ್ಲಿ ಶ್ರೇಷ್ಠವಾಗುವಂತೆ ವರದಾನ ಮಾಡಿದನು. ಅಷ್ಠೇ ಅಲ್ಲದೇ ತಾನು ಸ್ವತಃ ಅದೇ ಮಾಸದಲ್ಲಿ ಅವತಾರ ಮಾಡಿದನು. ಅಯೋಧ್ಯಯಲ್ಲಿರುವ ಸರಯೂ ನದಿ (ರಾಮತೀರ್ಥ) ಅಲ್ಲಿ ಸ್ನಾನ ಮಾಡಿದವರಿಗೆ, ಅವರಿಗೆ ಬರುವ ಎಲ್ಲ ಆಪತ್ತುಗಳನ್ನು ದೂರ ಮಾಡುತ್ತೇನೆ ಎಂದು ಹೇಳಿದ್ದಾನೆ.

ಚೈತ್ರ ಮಾಸದಲ್ಲಿ ಮಾಡಬೇಕಾದ ಕಾರ್ಯಗಳು

ಮಾರ್ಗದಲ್ಲಿ ಹೋಗುವವನಿಗೆ ನೀರಿನ ವ್ಯವಸ್ಥೆ (ಅರವಟ್ಟಿಗೆ)
ಬಿಸಿಲಿನಲ್ಲಿ ಬಂದವರಿಗೆ ಒಳ್ಳೆಯ ನೆರಳಿನ ವ್ಯವಸ್ಥೆ
ಊಟವಿಲ್ಲದವನಿಗೆ ಊಟ ವಸತಿ ವ್ಯವಸ್ಥೆ

ನೀರು ದಾನ ಮಾಡದೆ ಇದ್ದಲ್ಲಿ ಅವನು ಮುಂದೆ ಜಾತಕ ಪಕ್ಷಿಯಾಗಿ ಹುಟ್ಟಿ ನೀರಿಗಾಗಿ ಪರದಾಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿಲಾಗಿದೆ.
ಗೋದಿ, ಹಾಸಿಗೆ (ಶಯ್ಯಾ), ಬೆಲ್ಲ, ತುಪ್ಪ, ಮೊಸರು, ನೆಲ್ಲಿಕಾಯಿ, ಮಾವು ಇವೆ ಮೊದಲಾದವುಗಳು ವಿಶೇಷ ಪುಣ್ಯಕಾರಿ.

ಚೈತ್ರ ಮಾಸದಲ್ಲಿ ಅಯೋಧ್ಯಾ ಪಟ್ಟಣದಲ್ಲಿ ಇರುವ ಸರಯೂ ನದಿಯಲ್ಲಿ (ರಾಮತೀರ್ಥದಲ್ಲಿ) ಸ್ನಾನ ಮಾಡಬೇಕು. ವಿಶೇಷವಾಗಿ ರಾಮಾಯಣ ಶ್ರವಣ ಮಾಡಬೇಕು.
ಶ್ರಾಸ್ತ್ರದ ಒಂದು ಶ್ಲೋಕದಲ್ಲಿ ಈ ರೀತಿ ಹೇಳಲಾಗಿದೆ

ಸರ್ವ ತೀರ್ಥೇಷು ಯತ್ ಪುಣ್ಯಂ ಸರ್ವ ದಾನೇಷು ಯತ್ ಫಲಂ |
ರಾಮಾಯಣಸ್ಯ ಪಠಣಾತ್ ತತ್ ಫಲಂ ನವರಾತ್ರಕೇ ||

ಇದರ ಅರ್ಥ :

ಎಲ್ಲ ತೀರ್ಥಗಳಲ್ಲಿ ಹೋಗಿ ಸ್ನಾನಾದಿಗಳನ್ನು ಮಾಡಿದರೆ ಯಾವ ವಿಶಿಷ್ಠ ಪುಣ್ಯ ಪ್ರಾಪ್ತವಾಗುವುದೋ, ಎಲ್ಲ ದಾನಗಳನ್ನು ಮಾಡಿದರೇ ಯಾವ ಪುಣ್ಯ ಪ್ರಾಪ್ತವಾಗುವುದೋ, ಆ ಪುಣ್ಯ ರಾಮಾಯಣ ಶ್ರವಣದಿಂದ ಬರುತ್ತದೆ.

ಈ ಮಾಸದಲ್ಲಿ ಬರುವ ಮುಖ್ಯ ದಿನಗಳು:

೧) ಯುಗಾದಿ -- ಶುಕ್ಲ ಪ್ರತಿಪದ
೨) ಗೌರಿ ತೃತಿಯಾ -- ಶುಕ್ಲ ತೃತಿಯಾ
೩) ರಾಮನವಮಿ -- ಶುಕ್ಲ ನವಮಿ
೪) ಏಕಾದಶಿ
೫) ಹನುಮ ಜಯಂತಿ -- ಹುಣ್ಣಿಮೆ -- ದವನದ ಹುಣ್ಣಿಮೆ.

ಬುಧವಾರ, ಮಾರ್ಚ್ 11, 2009

ಇದೇ ಬ್ಲಾಗ್ - English ಅಲ್ಲಿ

ನಮಸ್ಕಾರ ,

ಈ ಬ್ಲಾಗ್ ಓದಿ, ನಿಮ್ಮ ಅನಸಿಕೆಗಳನ್ನು ತಿಳಿಸಿ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಕ್ಕೇ ಎಲ್ಲ ಓದುಗರಿಗೂ ನನ್ನ ಧನ್ಯವಾದಗಳು.

ಈ ಬ್ಲಾಗಿನ ಮೊದಲನೇಯ ಲೇಖನ ಬರೆದು ಜನರಿಗೆ ತಿಳಿಸಿದಾಗ ಕೆಲವರು ಇದು ಕನ್ನಡದಲ್ಲಿ ಇರುವುದು ಒಂದು ಕೊರತೆ ಎಂಬ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಕನ್ನಡ ಭಾಷೆ ಅರಿಯದೆ ಇರುವವರು, ಮತ್ತೆ ಕನ್ನಡ ಮಾತನಾಡಲು ಬಂದರೂ, ಸರಿಯಾಗಿ ಓದಲು ಬಾರದೆ ಇರುವವರೂ ಸಹ ಇಲ್ಲಿ ಪ್ರಕಟಿಸಲಾಗುವ ವಿಷಯಗಳನ್ನು ತಿಳಿದುಕೊಳ್ಳುವ ಇಚ್ಛೆಯನ್ನು ತಿಳಿಸಿದರು. ಈ ಕೊರತೆಯ ಅರಿವು ನಮಗೆ ಮುಂಚೆಯೇ ಗೊತ್ತಿದ್ದರು ಈ ಎಲ್ಲಾ ವಿಷಯಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡವವರು ಯಾರೂ ಇರಲಿಲ್ಲ. ಇದರಲ್ಲೂ ದೇವರ ಕೃಪೆಯಾಗಿ, ನನ್ನ ಸ್ನೇಹಿತನಾದ, IISc (Indian Institute of Science) ನಲ್ಲಿ Ph.D ವಿದ್ಯಾರ್ಥಿಯಾಗಿರುವ ರಜತ್. ವಿ. ಈ ಕೆಲಸಕ್ಕೇ ಮುಂದಾದನು. ನಮ್ಮ ಹಿಂದೂ ಧರ್ಮದ ಬಗ್ಗೆ ಅತ್ಯಂತ ಶ್ರದ್ಧೆ ಹಾಗೂ ಸುಮಾರು ಮಟ್ಟಿಗೆ ಅದರ ಬಗ್ಗೆ ಜ್ಞಾನ ಉಳ್ಳವನಾದ ರಜತ್ ಈ ಕೆಲಸಕ್ಕೇ ಸರಿಯಾದವನೆ ಎಂದು ಒಂದು ಆಂಗ್ಲ ಭಾಷೆಯ ಬ್ಲಾಗನ್ನು ಕೂಡಾ ಪ್ರಾರಂಭಿಸಿದೆ. ಅದು ಇಲ್ಲಿದೆ: http://panchaanga-english.blogspot.com/

ನಾನು ಈ ಕನ್ನಡ ಬ್ಲಾಗಿನಲ್ಲಿ ಬರೆಯುವ ಎಲ್ಲಾ ಲೇಖನಗಳನ್ನು English ಗೆ ಅನುವಾದ ಮಾಡುವುದಾಗಿ ರಜತ್ ಹೇಳಿದ್ದಾನೆ. ಇದಕ್ಕಾಗಿ ರಜತನಿಗೆ ತುಂಬಾ ಧನ್ಯವಾದಗಳು. ಭಾಷೆ ಈಗ ಯಾರಿಗೂ ಅಡ್ಡಿ ಆಗಬಾರದು. English ಬ್ಲಾಗ್ ನಿಂದ ಇನ್ನು ಹೆಚ್ಚಿನ ಜನರಿಗೆ ಈ ವಿಷಯಗಳು ಮುಟ್ಟಲಿ ಎಂದು ಪ್ರಾರ್ಥಿಸುತ್ತೇನೆ.

ಧನ್ಯವಾದಗಳು.

ಶನಿವಾರ, ಮಾರ್ಚ್ 7, 2009

ಪೀಠಿಕೆ -- ಇದು ಏನು, ಯಾರಿಗೆ ಮತ್ತು ಯಾಕೆ ?

ನಮಸ್ಕಾರ,

ಈ ಪುಟವನ್ನು ಓದುವುದಕ್ಕೆ ಬಂದ ನಿಮಗೆ ಸ್ವಾಗತ ಹಾಗೂ ಧನ್ಯವಾದಗಳು.

ನಮಗೆಲ್ಲಾ ಗೊತ್ತಿದ್ದಂತೆ ಹಿಂದೂ ಧರ್ಮ ಬಹಳ ಪುರಾತನವಾದುದು. ನಮ್ಮ ಈ ಧರ್ಮದ ಅಡಿಪಾಯ ವೇದಗಳು. ನಮ್ಮ ಧರ್ಮದಲ್ಲಿ ಎಷ್ಟೋ ಪಂಗಡಗಳಿದ್ದರೂ, ಆ ಪಂಗಡಗಳು ತಮ್ಮದೇ ಆದ ಆಚಾರ ವಿಚಾರಗಳನ್ನು ಇಟ್ಟುಕೊಂಡಿದ್ದರೂ ಅವೆಲ್ಲಾದಕ್ಕೂ ಮೂಲ ವೇದಗಳು ಎಂಬುದು ನನ್ನ ಭಾವನೆ. ಹಿಂದೂಗಳಾಂದತಹ ನಾವು, ಅಥವಾ ವೇದದಲ್ಲಿ ವಿಶ್ವಾಸ - ಗೌರವ ಇರುವ ಯಾವುದೇ ವ್ಯಕ್ತಿಯು ವೇದಗಳಲ್ಲಿ ಉಲ್ಲೇಖಿಸಿರುವ ಆದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಶ್ರೇಯಸ್ಕರ. ಕೇವಲ ದೇವರ ಸ್ತುತಿ ಮಾತ್ರವಲ್ಲದೇ ವೇದಗಳು ನಮ್ಮ ಸಾಮಾಜಿಕ ಜೀವನನದ ಮೇಲೂ ಬೆಳಕು ಚೆಲ್ಲುತ್ತವೆ. ಆದರೆ, ಆನಾದಿ ಕಾಲದಿಂದಲೂ ಇರುವ ಈ ವೇದದ ತಿಳುವಳಿಕೆ ಹಾಗೂ ಅದರ ಪಾಲನೆ ದಿನಗಳೆದಂತೆ ನಿಶ್ಶಕ್ತವಾಗುತ್ತಿದೆ. ಜನರ ಆಲಸ್ಯದಿಂದಲೋ ಅಥವಾ ಅಜ್ಞಾನದಿಂದಲೋ ವೇದಗಳ ಪಠನ, ಅವುಗಳ ಪಾಲನೆ ಕಡಿಮೆಯಾಗುತ್ತಾ ಬಂದಿದೆ. ಎಷ್ಟೋ ಕಡೇ ಅನುಸರಣೆ ಇದ್ದರೂ ಅದು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಸರಿಯಾಗಿ ಆದರೂ ಆಚರಣೆಗಳ ಕಾರಣ ಅಥವಾ ಮಹತ್ವ ಗೊತ್ತಿಲ್ಲ. ದಿನಗಳೆದಂತೆ ವೇದಗಳ ಮಹತ್ವ ಕಡಿಮೆಯಾಗುತ್ತಿದೆ ಹಾಗೂ ಅವುಗಳ ಆಚರಣೆಗಳಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿದ್ದು ಸರಿಯಾದ ಕ್ರಮ ಯಾವುದೆಂದು ತಿಳಿಯದೇ ಅವರವರ ಭಾವನೆಗೆ ತಕ್ಕಂತೆ ಆಚರಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈಗಿನ ಆಧುನಿಕ ಜೀವನ ಶೈಲಿ ಹಬ್ಬಗಳ ಆಚರಣೆಗಳನ್ನೂ ಕ್ರಮೇಣವಾಗಿ ದೂರ ಮಾಡುತ್ತಿದೆ. ಕೆಲಸಕ್ಕಾಗಿಯೋ, ಕಲಿಯುವುದಕ್ಕಾಗಿಯೋ ಮತ್ತಿನ್ಯಾವುದೋ ಕಾರಣದಿಂದಲೋ ದೂರದೇಶಕ್ಕೇ ಹೋಗಿ, ಮನೆಯ ಹಿರಿಯರಿಂದ ದೂರವಾಗಿರುವಂತಹ ನವ ಪೀಳಿಗೆಗೆ ಹಿರಿಯರಿಂದ ಕಲಿಯಬೇಕಾದಂತಹ ಎಷ್ಟೋ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಗೊತ್ತೇ ಆಗುವುದಿಲ್ಲ. ಹಾಗಾಗಿ ಆ ವಿಚಾರಗಳ ಹಸ್ತಾಂತರ ಆಗುತ್ತಿಲ್ಲ. ನಾನೂ ಸಹ ಇಂತಹ ಹೊಸ ಪೀಳಿಗೆಗೆ ಸೇರಿದವನು. ಆದರೆ ನಮ್ಮೆಲ್ಲಿರಗೂ ಈ ವಿಚಾರಗಳು ತಿಳಿದಿರಬೇಕು, ನಾವೂ ಸಹ ಅವುಗಳನ್ನು ಪಾಲಿಸಬೇಕು ಅನ್ನುವ ಅಭಿಪ್ರಾಯ ನನ್ನದು.

ನಮ್ಮ ಪೀಳಿಗೆಯ ಇನ್ನೊಂದು ವಿಶೇಷತೆ ಏನೆಂದರೇ, ನಾವು ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತೇವೆ. ಮಾಡಲು ಹೇಳಿದ ಕೆಲಸವನ್ನು ಇದೇ ರೀತಿ ಯಾಕೆ ಮಾಡಬೇಕು ಅಂತ ಕೇಳುತ್ತೇವೆ. ಸರಿಯಾಗಿ ಅರಿಯದೇ, ಮನಃಪೂರ್ವಕವಾಗಿ ಆ ಕೆಲಸವನ್ನು ಮಾಡಲು ನಾವು ಒಪ್ಪುವುದಿಲ್ಲ. ಯಾರಾದರೂ ಧರ್ಮದ ಬಗ್ಗೆ ಯಾವುದೇ ವಿಷಯವನ್ನು ಹೇಳಿದರೆ ಅದನ್ನು ಒಪ್ಪದೇ ಪ್ರಶ್ನಿಸುತ್ತೇವೆ. ಆದರೇ ನಮ್ಮ ಸನಾತನ ಹಿಂದೂ ಧರ್ಮ ಒಂದು ದಿನದಲ್ಲಿ ತಿಳಿಯುವಷ್ಟು ಸರಳವಾದುದಲ್ಲ. ಜೀವನದ ಪ್ರತಿಯೊಂದು ಕಾರ್ಯಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರಗಳಿವೆ. ಅವುಗಳೆಲ್ಲದರ ಅಧ್ಯಯನಕ್ಕೆ ಹತ್ತಾರು ವರ್ಷಗಳೇ ಬೇಕು. ಉತ್ತರ ಬೇಕೆನ್ನುವ ನಾವು ಅಷ್ಟು ಕಾಲ ಅವುಗಳ ಅಧ್ಯಯನಕ್ಕೆ ಮೀಸಲಿಡುವುದು ಕಷ್ಟ. ಆದರೆ ಉತ್ತರಗಳು ಬೇಕು - ಈ ಪರಿಸ್ಥಿತಿಗೇ ಪರಿಹಾರ ತರಬೇಕೆಂದೇ ನಾನು ಈ ಬ್ಲಾಗ್ (Blog) ಬರೆಯಲು ನಿರ್ಧರಿಸಿದೆ.

ಅದರೇ ಮೊದಲೇ ಹೇಳಿದಂತೆ ಈ ವಿಚಾರಗಳಲ್ಲಿ ನನ್ನ ಜ್ಞಾನವೂ ಅಷ್ಟಕಷ್ಟೇ. ಯಾವುದೇ ಸತ್ಕಾರ್ಯಕ್ಕೇ ದೇವರ ಅನುಗ್ರಹ ಇದ್ದೇ ಇರುತ್ತೇ ಅನ್ನುವ ಮಾತಿಗೆ ಸಾಕ್ಷಿಯಾಗಿ ನನಗೆ ಈ ಬ್ಲಾಗ್ ವಿಚಾರ ಬಂದಾಗ, ಶ್ರೀ ದೇವರ ಕೃಪೆಯಿಂದ ಸುಧಾ ಪಂಡಿತರಾದ, ಧಾರವಾಡ ನಗರದ ಶ್ರೀ || ಶ್ರೀಕಾಂತಾಚಾರ್ಯ ಬಿದರಕುಂದಿಯವರ ಪರಿಚಯವಾಯಿತು. ಧರ್ಮಜ್ಞಾನಿಗಳಾದ ಇವರಿಗೆ ನನ್ನ ವಿಚಾರವನ್ನು ತಿಳಿಸಿದೆ. ಅವರಿಗೂ ಇದು ಸರಿಯಾದ ವಿಚಾರವೆಂದನಿಸಿ, ಆಗಲಿ ಎಂದು ಆಶೀರ್ವದಿಸಿದರು. ಈಗ ಈ ಬ್ಲಾಗಿನಲ್ಲಿ ಬರೆಯಲು ನನಗೆ ಬೇಕಾದ ಮಾಹಿತಿಯನ್ನು ಶ್ರೀಯುತರು ಒದಗಿಸಿಕೊಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಾ ಈ ಬ್ಲಾಗ್ ಜನರಿಗೆ ಉಪಯುಕ್ತವಾಗಲಿ, ಜನರು ಇದನ್ನು ಓದಿ ಹೆಚ್ಚು ಧಾರ್ಮಿಕರಾಗಲಿ ಎಂದು ಆಶೀರ್ವದಿಸಲು ಕೋರುತ್ತೇನೆ.

ಇನ್ನು ಈ ಬ್ಲಾಗಿನಲ್ಲಿ ಏನೇನು ಬರೆಯುತ್ತೇನೆ ಅನ್ನುವುದರ ಬಗ್ಗೇ ಒಂದು ಚಿಕ್ಕ ಪರಿಚಯ :

೧) ಮೊಟ್ಟ ಮೊದಲಿಗೆ ಹಿಂದೂ ಪಂಚಾಂಗದ ಪ್ರಕಾರ ಬರುವ ಹಬ್ಬಗಳು, ಅವುಗಳ ಆಚರಣೆ ಮತ್ತು ಆ ಆಚರಣೆಯ ಹಿಂದಿರುವ ಉದ್ದೇಶ.
ಈ ಮಾಹಿತಿಯನ್ನ ಕೆಳಗಿನ ವಿಭಾಗಗಳಲ್ಲಿ ತಿಳಿಸಲು ಪ್ರಯತ್ನಿಸುತ್ತೇನೇ -
  • ಮಾಸಪಕ್ಷ – ತಿಥಿ
  • ದಿನದ ಮಹತ್ವಶಾಸ್ತ್ರದ ಯಾವ ಭಾಗದಲ್ಲಿ (ಅಂದರೇ ಪುರಾಣದಲ್ಲೋ, ಉಪನಿಷತ್ತಿನಲ್ಲೋ, ಇತ್ಯಾದಿ) ಇದರ ಉಲ್ಲೇಖ ಇದೆ ಮತ್ತು ಯಾಕೆ ಮಾಡಬೇಕೆಂದು ಅಲ್ಲಿ ಹೇಳಿದ್ದಾರೆ.
  • ಹಬ್ಬವನ್ನ ಯಾವ ರೀತಿ ಆಚರಿಸಬೇಕು, ಯಾವ ರೀತಿ ಆಚರಿಸಬಾರದು (ಈಗಿರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳು)
  • ಹಾಗೂ ಪ್ರತಿ ಆಚರಣೆಯ ಪದ್ಧತಿಗೂ ಕಾರಣ ಹಾಗೂ ಮಹತ್ವ.
ಇವುಗಳ ಜೊತೆ ಇನ್ನೂ ಏನಾದರು ಸೇರಿಸಬಹುದು ಎಂದನಿಸಿದರೆ ನಮಗೆ ತಿಳಿಸಿ. ಸಾಧ್ಯವಾದಷ್ಟು ಮಾಹಿತಿಯನ್ನು ಇಲ್ಲಿ ಕೊಡಲು ಪ್ರಯತ್ನಿಸುತ್ತೇವೆ.

೨) ಹಬ್ಬಗಳ ಜೊತೆ ನಮ್ಮ ದಿನನಿತ್ಯದ ಕಾರ್ಯಗಳನ್ನಾಗಲಿ, ಅಥವಾ ಕೆಲವು ವಿಶೇಷ ಕಾರ್ಯಗಳನ್ನಾಗಲಿ ಹೇಗೇ ಮಾಡಬೇಕು ಅಂತ ವೇದಗಳ ಅಂಗವಾದ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಜೋತಿಷ್ಯ ಶಾಸ್ತ್ರದ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ನಾನಾ ವಿಧವಾದ ವಿಚಾರಗಳಿವೆ. ಆದರೆ ಅದು ನಿಜಕ್ಕೂ ವೇದದ ಒಂದು ಅಂಗ, ಅದಕ್ಕೆ ಅರ್ಥವಿದೆ ಮತ್ತು ಅದರಲ್ಲಿ ಹೇಳಿರುವ ವಿಚಾರಗಳು ಸರಿ ಎಂದು ನನಗನಿಸಿ ಅದನ್ನು ಇಲ್ಲಿ ಸೇರಿಸುತ್ತಿದ್ದೇನೆ. ಜೋತಿಷ್ಯ ಅಂದರೆ ನಾನಿಲ್ಲಿ ಯಾರ ಭವಿಷ್ಯ ಹೇಳುವುದಿಲ್ಲ, ರಾಶಿ ನಕ್ಷತ್ರ ನೋಡಿ ಫಲ ಹೇಳೋದಿಲ್ಲ. ಇಲ್ಲಿ ವರ್ಷದ ಒಂದು ಮಾಸದ ಈ ದಿನ ಯಾವ ಕಾರ್ಯಕ್ಕೇ ಶುಭ, ಯಾವುದಕ್ಕೆ ಅಶುಭ ಎಂಬ ವಿಚಾರವನ್ನು ತಿಳಿಸಲಾಗುತ್ತದೆ. ಇದರೊಂದಿಗೆ ಮತ್ತಿತರ ಅಗತ್ಯ ಮಾಹಿತಿಗಳನ್ನು ಪ್ರಕಟಿಸುತ್ತೇನೆ.

ನಿಮಗೆ ನಿಮ್ಮ ರಾಶಿ, ನಕ್ಷತ್ರಗಳ ವಿಚಾರವಾಗಿ ಹೆಚ್ಚಿನ ಮಾಹಿತಿ ಬೇಕಾದಲ್ಲಿ, ಕುಂಡಲಿ, ಜಾತಕ, ಫಲ, ಕಷ್ಟ ಪರಿಹಾರದಂತಹ ವಿಶಯಗಳಲ್ಲಿ ಸಹಾಯ ಬೇಕಾದಲ್ಲಿ ಜೋತಿರ್ಜ್ಞಾನಿಗಳಾದ ಶ್ರೀ ಶ್ರೀಕಾಂತಾಚಾರ ಬಿದರಕುಂದಿ, ಧಾರವಾಡ ಇವರನ್ನು ಸಂಪರ್ಕಿಸಬಹುದು. ಇವರ ಸಂಪರ್ಕ ವಿವರಗಳು ಇದೇ ಪುಟದ ಪ್ರಾರಂಭದಲ್ಲಿವೆ.

ಈ ಎಲ್ಲಾ ಮಾಹಿತಿಯನ್ನು ಮಾಸ-ಪಕ್ಷ-ತಿಥಿ ಪ್ರಕಾರವಾಗಿ ಪ್ರಕಟ ಮಾಡಲಾಗುತ್ತದೇ. ಹಾಗಾಗಿ ಬರುವ ಯುಗಾದಿ, ಅಂದರೇ ಬರುವ ಚೈತ್ರ ಮಾಸದ, ಶುಕ್ಲ ಪಕ್ಷದ, ಪ್ರಥಮ ದಿನವಾದ ಪ್ರತಿಪದ ದಿನದಿಂದ ಆರಂಭಿಸಬೇಕೆಂದು ನಿರ್ಧರಿಸಿದ್ದೇವೆ. ಆಂಗ್ಲ ಕ್ಯಾಲೆಂಡರ್ (English Calendar) ಪ್ರಕಾರ ಯುಗಾದಿ ಇದೇ ತಿಂಗಳು March-27 ರಂದು ಇದೆ. ಅದಕ್ಕಿಂತ ಕನಿಷ್ಠ ಪಕ್ಷ ಎರಡು ಅಥವಾ ಮೂರು ದಿನಗಳ ಮುಂಚಿತವಾಗಿಯೇ ಚೈತ್ರ ಮಾಸದ ಮಾಹಿತಿಯನ್ನು ಪ್ರಕಟ ಮಾಡುತ್ತೇವೆ. ಸಾಧ್ಯವಾದಲ್ಲಿ ಅದಕ್ಕಿಂತ ಬೇಗನೇ ಒದಗಿಸಲು ಪ್ರಯತ್ನಿಸುತ್ತೇವೆ. ಮುಂದುವರೆದಂತೆ ಕ್ರಮೇಣ ಒಂದೊಂದಾಗಿ ಎಲ್ಲಾ ಮಾಸಗಳ ವಿವರಗಳನ್ನು ಪ್ರಕಟಿಸುತ್ತೇವೆ.

ಮತ್ತೆ ಮತ್ತೆ ಈ ಪುಟವನ್ನು ಓದಲು ಬನ್ನಿ, ಹೊಸ ವಿಚಾರಗಳನ್ನ ತಿಳಿಯಿರಿ ಇತರರಿಗೆ ತಿಳಿಸಿ, ನಿಮ್ಮ ಅಭಿಪ್ರಾಯವನ್ನೂ ಬರೆಯಿರಿ.

ಅದೆಲ್ಲದರ ಜೊತೆ ಬರುವ ಹೊಸ ವರ್ಷದಿಂದ, ಅಂದರೇ ಯುಗಾದಿಯಿಂದ ಇಲ್ಲಿರುವ ವಿಷಯಗಳನ್ನ ಓದಿ, ನಿಮಗೇ ಸಮಂಜಸವೆನಸಿದಲ್ಲಿ ಅದನ್ನು ಪಾಲಿಸಿ ಇನ್ನು ಧಾರ್ಮಿಕರಾಗಿ.

ಓದುಗರಲ್ಲಿ ನಮ್ಮ ಕೋರಿಕೆ : ಈ ಬ್ಲಾಗಿನ ವಿಚಾರವನ್ನು ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಮತ್ತು ಇತರ ಪರಿಚಯದವರಿಗೆ ತಿಳಿಸಿ, ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುವಲ್ಲಿ ನಮ್ಮೊಡನೆ ಸಹಕರಿಸಬೇಕಾಗಿ ವಿನಂತಿ.